ಗುರುವಾರ, ಸೆಪ್ಟೆಂಬರ್ 2, 2021

ನೆನಪುಗಳ ನರ್ತನ

ನೆನಪುಗಳ ನರ್ತನ

ಜಿಟಿ ಜಿಟಿ ತಂಪಾಗಿ
ಮಳೆಯು ಸುರಿಯುತಿದೆ
ಮನದಿ ತಿರುಗಿ ತಿರುಗಿ
ನಿನ್ನ ನೆನಪು ಕಾಡುತಿದೆ
ಮನ ಮರುಗಿ ಮರುಗಿ
ವಿರಹ ಮೂಡುತಿದೆ

ಬನದಿ ನಗುವ ಗುಲಾಬಿಯ
ಬಿಸಿಲ ಧಗೆಗೆ ಮುದುರಿದೆ
ಬಾನೆತ್ತರಕೆ ಹಾರುವ ಹಕ್ಕಿ
ಗೂಡಲಿ ಮುದುಡಿ ಕುಳಿತಿದೆ
ನಗುವ ಮನವು ಈಗ
ಮಾತಿಲ್ಲದೇ ಮೂಕವಾಗಿದೆ

ಮಾಸದ ನೆನಪುಗಳು
ಮನದಿ ನರ್ತನ ಮಾಡಿದೆ
ಸಮಾಧಿಯೊಳಗಿನ ಭಾವ
ಮತ್ತೆ ಜೀವವ ಪಡೆದಿದೆ
ಭಾವದ ಅಲೆಯೊಳಗೆ
ಜೀವ ಸಿಲುಕಿ ನಲುಗಿದೆ

ಗುರುವಾರ, ಜುಲೈ 8, 2021

ದೇವಾ..

ಜೀವ ಜೀವನವೂ ನಿನದೇ ದೇವಾ
ಅರ್ಪಿಸುವೆ ಶುದ್ಧ ಮನದಿ ಹೂವಾ

ಪರಿಪರಿ ಕಷ್ಟದಲಿ ಬಳಲಿದೆ ಈ ಜೀವಾ
ಬಿಚ್ಚಿಡುವೆ ಮನದಿ ಅಡಗಿದ ನೋವಾ
ಪರಿತಾಪವ ಪರಿಹರಿಸು ನೀ ದೇವಾ
ಸಂತೈಸು ಬಳಲಿರುವ ಈ ಮನವಾ

ಬೇಸರವೀ ಜೀವನದ ಯಾನ
ಸಹಿಸಲಾರೆ ನೀರಸವಾದ ಮೌನ
ಕಂಗಳಲಿ ನೋವಿನದೇ ಕಥನ
ಮನದಿ ಮೂಡಿದೆ ಕಣ್ಣೀರ ಕವನ

ಮೂರು ದಿನದ ನಮ್ಮ ಜೀವನವು
ಆಸೆಯಲೆಯ ಮೇಲೆ ಪಯಣವು
ಅಪರಿಮಿತ ಅಮೂರ್ತ ಭಾವವು
ಭರವಸೆಯಲಿ ಸಾಗುತಿದೆ ಜೀವನವು


ವೇದಾವತಿ ಭಟ್ಟ 
ಮುಂಬೈ 

ಬುಧವಾರ, ಜುಲೈ 7, 2021

ಪ್ರಕೃತಿ ಮಾತೆಯ ಕೂಗು

ಪ್ರಕೃತಿ ಮಾತೆಯ ಕೂಗು

ಇತ್ತೊಂದು ಕಾಲದಿ ಸುತ್ತಲೂ ಹಸಿರು
ಬೇಕಾಗಿರಲಿಲ್ಲ ಅಂದು ಸ್ವಾರ್ಥದ ಹೆಸರು
ಆಡಿಸಬಹುದಿತ್ತು ಸ್ವಚ್ಛಂದದ ಉಸಿರು
ಕೈ ಕೆರಾದರೆ ಬಾಯಿಗೆ ಸಿಗುತ್ತಿತ್ತು ಮೊಸರು

ಬದಲಾಯಿತು ನೋಡು ನೋಡುತಲೇ ಕಾಲ
ಆವರಿಸಿತು ಮನುಜನಿಗೆ ಹಣವೆಂಬ ಜಾಲ
ಆಸೆಯಿಂದ ಕೂಡಿದ ಮನದ ಬೆಂಬಲ
ಭ್ರೂಣದಲೇ ಹಸಿರು ಹತ್ಯೆ ಮಾಡುವ ಕಾಲ

ಕೇಳುವವರಿಲ್ಲ ಪ್ರಕೃತಿ ಮಾತೆಯ ಗೋಳನು
ಅವಳ ರೋಧನವು ಮುಟ್ಟಿತು ಮುಗಿಲನು
ಭವಿಷ್ಯದ ಚಿಂತೆ ಇಲ್ಲದ ಕಪಟಿ ಮಾನವನು
ಸ್ವಾರ್ಥಕಾಗಿ ಎಲ್ಲವನು ಹಾಳು ಮಾಡಿಹನು

ಅರಿತು ನಡೆದರೆ ಈ ಬದುಕು ಬಂಗಾರ
ಹಸಿರಿನ ಜೊತೆಗಿನ ಬದುಕೇ ಸುಂದರ
ಮತ್ತೆ ಹರಡುವ ಎಲ್ಲೆಲ್ಲೂ ಹಸಿರಿನ ಹಂದರ
ಸುತ್ತ ಹಸಿರು ಇರಲು ಬೇಡ ಬೇರೆ ಸಿಂಗಾರ

ಮುಂಗಾರಿನ ಲಾಸ್ಯ

ಮುಂಗಾರ ಹಸಿರು ಲಾಸ್ಯ

ಬಂದಿದೆ ಮುಂಗಾರು ಮಳೆ
ತಂಪಿನಲಿ ತೊಯ್ದಿತು ಇಳೆ
ತೊಳೆಯಿತು ಇಳೆಯ ಕೊಳೆ
ನಳನಳಿಸುತಿದೆ ಹಸಿರು ಬೆಳೆ

ಮುತ್ತಿನ ಹನಿಯ ಸಿಂಚನ
ತಂಪಾಗಿ ಹಿಗ್ಗಿದೆ ಮೈ-ಮನ
ಎಲ್ಲೆಲ್ಲೂ ಹಸಿರಿನ ಜನನ
ಇಳೆಯೀಗ ಇಂದ್ರನ ನಂದನ

ಜಲಲ ಧಾರೆಯ ಸವಿಗಾನ
ಕಳಚಿದೆ ಬೀಜದ ಬಂಧನ
ಹಸಿರು ಸಸಿಗಳದೇ ನರ್ತನ
ಹಲವು ಭಾವಗಳ ಜನನ

ಎಲ್ಲೆಲ್ಲೂ ಚಿಗುರು ಚಿಗುರಿದೆ
ಭುವಿಯು ಬಣ್ಣವಾಗಿದೆ
ತಂಗಾಳಿಯ ತಂಪು ಹರಡಿದೆ
ಮುಂಗಾರು ಮುದವ ತಂದಿದೆ

ಮೊದಲ ಮಳೆಯ ಪುಳಕ


ಮೊದಲ ಮಳೆಯ ಪುಳಕ ಮನಕೆ
ಮಯೂರಕೆ ನರ್ತನದ ಸುಬಯಕೆ
ಭುವಿಯು ಹಸಿರು ಸೀರೆಯ ಕನ್ನಿಕೆ
ನಯನಕೆ ಸ್ವರ್ಗವು ಬೇರೆ ಏತಕೆ??

ಸುರಿಯುತಿದೆ ಬಿಡದೆ ವರ್ಷಧಾರೆ
ಸುತ್ತಲೂ ಹರಿದಿದೆ ಜಲಲಧಾರೆ
ಇನಿತು ಸೊಬಗು ನಮ್ಮ ವಸುಂಧರೆ
ಇನಿಯನ ಕಾಯುವ ಈ ಮನೋಹರೆ

ಭಾರವಾಗಿದೆ ಹನಿಯಿಂದ ಮುಗಿಲು
ಹಸಿರು ಗಿಡದ ಮೇಲೆ ಹನಿ ಸಾಲು
ಎತ್ತ ನೋಡಿದರೂ ಹಸಿರು ಫಸಲು
ಆಘ್ರಾಣಿಸಲು ಮಣ್ಣಿನ ಈ ಘಮಲು

ವೇದಾವತಿ ಭಟ್ಟ
ಮುಂಬೈ 

ಬದುಕು


ಬದುಕೊಂದು ವಿಸ್ಮಯದ ಗೂಡು
ಕೆದಕಿದರೆ ಬಲು ಅದ್ಭುತಗಳ ಜಾಡು
ಬೆದರದೆ ಮುಂದಮುಂದಕೆ ಓಡು
ಹಿಂದಿರುಗಿ ಇತಿಹಾಸವ ನೋಡು

ಬಂಧನಗಳು ಬಾಳಲಿ ಹಲವು
ಚಂದದಲಿ ಇರುವವು ಕೆಲವು
ಸುಂದರವು ಈ ಬಾಂಧವ್ಯವು
ನಂದನವಾಗಲಿ ಈ ಜೀವನವು

ಕಷ್ಟಗಳು ಬಂದು ಹೋಗುವವು
ನಷ್ಟಗಳು ಇದ್ದೇ ಇರುವವು
ಇಷ್ಟವಾದುದೆಲ್ಲ ಸಿಗಲಾರವು
ಎಷ್ಟು ವಿಚಿತ್ರ ಈ ಜೀವನವು

ಸವಿ ನೆನಪುಗಳ ಜೀವನದಲಿ
ಸವಿಯುತ ಸಾಗವ ನಾವಿಲ್ಲಿ
ನಲಿವು ನೋವಿನ ಯಾನದಲಿ
ಬಲವು ತುಂಬಿ ಗೆಲುವಾಗಿರಲಿ

ವೇದಾವತಿ ಭಟ್ಟ
ಮುಂಬೈ 

ಆರೋಗ್ಯ

ಎಲ್ಲದಕೂ ನಮಗೆ ಆರೋಗ್ಯ
ಇದುವೇ ಮೊದಲನೆಯ ಭಾಗ್ಯ
ಎಷ್ಟಿದ್ದರೇನು ಸಕಲ ಸೌಭಾಗ್ಯ??
ಎಲ್ಲ ಸವಿಯಲು ಬೇಕು ಆರೋಗ್ಯ

ಅತಿಯಾದರೆ ಸಿರಿ ಸಂಪತ್ತು
ಬರುವುದು ತಾನಾಗಿ ಆಪತ್ತು
ಆಸೆಪಡಬೇಡ ಪರರ ಸ್ವತ್ತು
ಅದಕಾಗಿ ಬೇಡವು ಕಸರತ್ತು

ಮೈಮುರಿದು ನೆಲದಿ ಉತ್ತಿ ಬಿತ್ತು
ಆಗ ದೊರೆಯುವುದು ಸಂಪತ್ತು
ದೇಹಸುಖ ಆತಿಯಾದರೆ ಕುತ್ತು
ಆರೋಗ್ಯಕ್ಕೆ ಬರುವುದು ಆಪತ್ತು

ದೇಹ ಸೌಖ್ಯವಿರಲು ಎಲ್ಲವೂ ಯೋಗ್ಯ
ಬೇಡುವ ಮೊದಲು ಆರೋಗ್ಯ ಭಾಗ್ಯ
ಇದುವೇ ಆಗಿಹುದು ಬಲು ಅನರ್ಘ್ಯ
ಇದು ತಿಳಿ ಮೊದಲು ನೀ ಅಯೋಗ್ಯ..!!

ವೇದಾವತಿ ಭಟ್ಟ
ಮುಂಬೈ