ಶುಕ್ರವಾರ, ಮಾರ್ಚ್ 21, 2014

ಹನಿಗವನಗಳು



ಬಿಡುಗಡೆ…
ಅಮವಾಸ್ಯೆ ಚಂದ್ರನಿಗೂ ಉಂಟೂ
ಹುಣ್ಣಿಮೆಯೆಂಬ ಸಂಭ್ರಮದ ಬೆಳಕು
ಕತ್ತಲಾಗುತ್ತಲೇ ಮರೆಯಾಗುವ ಸೂರ್ಯನಿಗೂ ಉಂಟು
ಪ್ರತಿ ಮುಂಜಾನೆ ಹೊಸಹುಟ್ಟು…
ಭಾವಗಳ ಸೆರೆಯಲಿ
ಕೈದಿಯಾಗಿರುವ ಮನಸೇ
ನಿನಗೇಕೇ ಬಿಡುಗಡೆಯಿಲ್ಲ
ನಾಳೆಗಳ ಸಂಭ್ರಮಿಸಲು???

ಮರೆವು
ಓ ಮರೆವೇ ,,,,,,
ಮನದ ತುಂಬಾ ಹರಡಿ
ಕಾಡುತಿಹ ಕಹಿ ನೆನಪುಗಳ
ಕೊನೆಯಾಗಿಸಲು ವರವಾಗಿ ಬಾ....

ವರ್ಷಧಾರೆ,,,,
ಒಲವೆಂಬ ವರ್ಷಧಾರೆ
ಹಸಿರು ಚಿಗುರಿಸದೇ
ಮನಸ್ಸನ್ನೆಲ್ಲ ಕೆಸರು ಮಾಡಿ
ಹೋದಮೇಲೆ
ಬಿರುಮಳೆಗೆ ಸಿಲುಕಿ
ಬಣ್ಣ ಮಾಸಿದ
ಚಿತ್ರದಂತಾಯಿತು ಬದುಕು,,,

ಇನಿಯಾ,
ನೀ ನನ್ನ ಮರೆತು ದೂರಾದ ಮೇಲೆ
ನಿನ್ನ ನೆನಪುಗಳಿಗೆಲ್ಲ ಸುಲಭವಾಗಿ
ಸಮಾಧಿ ಕಟ್ಟಬೇಕೆಂದುಕೊಂಡೆ....
ಆಮೇಲೆ ತಿಳಿಯಿತು
ಅದು ಬರಿ ನಿನ್ನ ನೆನಪುಗಳಿಗೆ
ಕಟ್ಟಿದ ಸಮಾಧಿಯಲ್ಲ
ನನ್ನದೇ ಸಮಾಧಿಯೆಂದು.....

ಕಂಬನಿ
ಮೋಡ ಹಗುರಾಗಲು
ಸುರಿಸುವುದು ವರ್ಷಧಾರೆ…..
ಹೃದಯ ಹಗುರಾಗಲು
ಸುರಿಸುವುದು ಕಣ್ಣೀರಧಾರೆ….

ತ್ಯಾಗ
ಹೆಣ್ಣೇನಿನಗೂ ತ್ಯಾಗವೆಂಬ
ಪದಕ್ಕೂ ಎಂತಾ ನಂಟು.....!!
ತಾಯಿಯಾಗಿ ಕಂದನಿಗಾಗಿ
ಮಾಡುವೆ ತ್ಯಾಗ...
ಮಗಳಾಗಿ ತಂದೆಯ
ಪ್ರತಿಷ್ಹೆಗಾಗಿ ತ್ಯಾಗ...
ಸಹೋದರಿಯಾಗಿ ಸಹೋದರನ
ಅವಕಾಶಗಳಿಗಾಗಿ ತ್ಯಾಗ...
ಹೆಂಡತಿಯಾಗಿ ಗಂಡನ
ಸುಖಕ್ಕಾಗಿ ತ್ಯಾಗ...

ಮನಸೇ,,,,
ಮನ ಒಳಗೊಳಗೆ ಬಿಕ್ಕುತಿದೆ
ಕಾರಣ ಮಾತ್ರ ನಿಗೂಢ..
ವಿಷಾದದ ಕರಿನೆರಳು ಹಬ್ಬಿ
ಮನದ ಶಾಂತಿಯ
ಕೊನೆಗಾಣಿಸಿದೆ...

ಮನ ಒಮ್ಮೊಮ್ಮೆ ನಗುತ್ತದೆಕೂಡ
ನಗುವಿಗೆ ಕಾರಣವಿಲ್ಲ…
ಸಂತಸದ ಎಳೆ ಎಲ್ಲೋ
ಇಣುಕಿ ಮಾಯವಾಗುತ್ತಿರಬೇಕು....

ಮನಸೇ....,


ಭಾವನಾ ಲೋಕದಲಿ ಮೈಮರೆತು
ಹಕ್ಕಿಯಂತೆ ಹಾರದಿರು ಮನಸೇ,
ಭಾವನೆಗಳೆಲ್ಲ ಮಂಜಿನ ಮುಸುಕಿನಂತೆ ಕರಗಿ
ಉಳಿಯುವುದು ಬರೀ ಬಿಸಿಲು, ಹಿಂಬಾಲಿಸುವ ಕರಿನೆರಳು....

ಸೋನೆ ಮಳೆಯ ತಂಪಿಗೆ
ಹುಚ್ಚೆದ್ದು ಕುಣಿಯಬೇಡ ಮನಸೇ,
ಮಳೆಯ ಜೊತೆಗೆ ಬರುವುದು
ಆರ್ಭಟಿಸುವ ಸಿಡಿಲು, ಕೊಚ್ಚಿಹೋಗುವಂತ ಭೀಕರ ಪ್ರವಾಹ....

ಪ್ರೀತಿಯೆಂಬ ಮಾಯೆಯನ್ನು
ನೀ ನಂಬಬೇಡ ಮನಸೇ,
ಕೊನೆಗೆ ಉಳಿಯುವುದು
ಬರೀ ನೋವು, ಕಣ್ಣೀರು, ವಿಷದಂತಹ ಕಹಿ ನೆನಪುಗಳು....