ಮಂಗಳವಾರ, ಅಕ್ಟೋಬರ್ 6, 2020

ಗುರು



ಚರಣ ಕಮಲಗಳಿಗೆ ವಂದನೆ
ಮಾಡದಿರುವೆ ಎಂದು ನಿಂದನೆ
ಜ್ಞಾನ ನೀಡಿ ನಮ್ಮನು ಕಾವನೆ
ಗುರುವೇ ದೇವನೆಂಬ ಭಾವನೆ

ಜ್ಞಾನ ಜ್ಯೋತಿಯನು ಬೆಳಗಿಸುವ
ಅಂಧಕಾರವ ದೂರ ಓಡಿಸುವ
ಅಕ್ಕರೆಯ ಕೊಡುವ ಗುರುವ
ನೀಡು ನೆನೆಯುವಂತ ಮನವ

ಹೊಮ್ಮಿಸಿ ಸುಜ್ಞಾನದ ಕಿರಣ
ತುಂಬಿಸಿ ಮೌಲ್ಯಗಳ ಸ್ಪುರಣ
ಹರಿಸಿ ನಿನ್ನಯ ಪ್ರೀತಿ ಕರುಣ
ಸ್ಪರ್ಶಮಣಿಯು ನಿನ್ನ ಚರಣ

ಶಿಲೆಯ ಆಗುವುದು ಶ್ರಮದೆ ಶಿಲ್ಪ
ಸಾಧನೆಗೆ ನೀಡುವೆ ಕಾಯಕಲ್ಪ
ಅಮರನಾಗುವನು ನಿನ್ನಿಂದ ಅಲ್ಪ
ನಿನಗಿಲ್ಲ ಬೇಧಭಾವವು ಸ್ವಲ್ಪ

ಸೋಮವಾರ, ಅಕ್ಟೋಬರ್ 5, 2020

ಆಹ್ವಾನ

ಹೆತ್ತ ತಂದೆ-ತಾಯಿಯರ
ಬಂಧನವ ಬಿಡಿಸಿ
ದುರುಳನಾದ ಕಂಸನ
ಸಂಹರಿಸಿದೆ ನೀ ಮುರಳಿ...

ನಿನಗೆ ಮೃತ್ಯುವಾಗಲು
ಬಂದ ರಾಕ್ಷಸಿ ಪೂತನಿಯ
ಮಗುವಾಗಿರುವಾಗಲೇ
ಕೊಂದೆ ನೀ ಶ್ಯಾಮ...

ಕೌರವ ಸಭೆಯಲಿ ದ್ರೌಪದಿಯ
ವಸ್ತ್ರಾಪಹರಣ ತಡೆದು
ಮಾನ ಉಳಿಸಿದ
ಮಹಾನುಭಾವ ನೀ ಕೃಷ್ಣ...

ಧರ್ಮ ರಕ್ಷಣೆಗಾಗಿ ಕರ್ಣನ
ಬಾಣದಿಂದ ಬಹು ಸೂಕ್ಷ್ಮದಿ
ಅರ್ಜುನನ ಪ್ರಾಣವನು
ಉಳಿಸಿದೆ ನೀ ಮಾಧವ..

ಈ ಕಲಿಯುಗದಿ ಮತ್ತೆ
ಅವತರಿಸಿ ಕಾಣದ ವಿಷಾಣುವಿನ
ಅಬ್ಬರವ ನಿಲ್ಲಿಸಿ ಮುಗ್ಧ ಜೀವಗಳ
ಉಳಿಸು ದುಷ್ಟ ಸಂಹಾರಿ ಮೋಹನ..







ಬಂಧಿ

ಕಾದು ಕುಳಿತಿಹೆ ನಾನು
ಆ ಶಬರಿಯಂತೆ
ಮನಕೆ ಮುದ ನೀಡಲು
ಬರುವೆ ನೀನೆಂದೂ...??

ಕಳೆದ ಆ ಮಧುಮಧುರ
ನೆನಪುಗಳಿಗೆ
ಮರು ಜೀವ ನೀಡುವ
ಕ್ಷಣವು ಬರುವುದೆಂದೂ...??

ಪಂಜರದ ಗಿಣಿಯಂತೆ
ಬಂಧಿ ನಾನಿಲ್ಲಿ
ಕಾಡುತಿಹ ಭಯವು
ಕೊನೆಯಾಗುವುದೆಂದೂ...??

ಪಾಂಡವರ ಬೇಗುದಿಗೂ
ಮಿಗಿಲಾದ ಈ
ಅಜ್ಞಾತವಾಸ ನನಗೆ
ಮುಗಿವ ಕ್ಷಣವೆಂದೂ...??

ಸೃಷ್ಟಿಯ ಸೊಬಗು


ದೇವನ ಅವಿಸ್ಮರಣೀಯ ಕಾಣಿಕೆ
ಹಸಿರ ಹಿರಿಯ ಈ ವನಮಾಲಿಕೆ
ಚೆಲುವಿನ ಸಿರಿಗಿಲ್ಲವೂ ಹೋಲಿಕೆ
ಚಿರಯೌವ್ವನದ ಸೊಬಗ ಕನ್ನಿಕೆ

ಪರಮ ಪಾವನವಾದ ಜಲವು
ಸ್ಥಿರತೆ ಸಾರುವ ಕಲ್ಲಿನ ಚೆಲುವು
ಮೆರಗು ನೀಡುತಿಹ ಕ್ಷಿತಿಜವು
ಮೈಮರೆತು ವೀಕ್ಷಿಸುವ ಮನವು

ಕೌತುಕವು ಸೃಷ್ಟಿಯ ವೈಚಿತ್ರ್ಯ
ಭುವಿ-ಭಾನಿನೊಳು ಸಾಮರಸ್ಯ
ಪ್ರಕೃತಿಯಿದು ಪುಣ್ಯ ಪಾವಿತ್ರ್ಯ
ರಸಿಕ ಕಂಗಳಿಗಿದೋ ಸ್ವಾತಂತ್ರ್ಯ

ಪದಗಳಿಗೆ ನಿಲುಕದ ಸೊಬಗು
ಹೊಂಬೆಳಕು ನೀಡಿದೆ ಮೆರಗು
ಮಾಧುರ್ಯವು ಹಕ್ಕಿಯ ಕೂಗು
ಮುತ್ತಿನ ಹನಿಗಳ ಬಿನ್ನಾಣ ಬೆಡಗು



ಪರಿವರ್ತನೆ

ಅಡಗಿ ಕುಳಿತಿಹೆವು ನಾವು
ಸೂಕ್ಷ್ಮಾಣು ಜೀವಿಗೆ ಹೆದರಿ
ಅಡಗಿ ಕುಳಿತಿಹೆವು ನಾವು...

ಸಂಬಂಧಗಳ ಮರೆತು
ಬಾಂಧವ್ಯಗಳ ಮರೆತು
ಹೆದರಿ ಕುಳಿತಿಹೆವು ನಾವು...

ಬೀದಿ ಬೀದಿಯ ಸುತ್ತದೇ
ಮಾಲ್ ಶಾಪಿಂಗ್ ಇಲ್ಲದೇ
ಹೆದರಿ ಕುಳಿತಿಹೆವು ನಾವು...

ಕಾಯಿಪಲ್ಲೆ, ಹಣ್ಣು ತರಕಾರಿ
ತರಲು ಹೋಗುತ್ತಿಲ್ಲ ಸವಾರಿ
ಹೆದರಿ ಕುಳಿತಿಹೆವು ನಾವು...

ಶವ ಸಂಸ್ಕಾರಕೂ ಹೆದರಿ
ಮಾನವೀಯತೆಯ ತೂರಿ
ಹೆದರಿ ಕುಳಿತಿಹೆವು ನಾವು...

ಓಡುತಿರುವ ಜಗವು ನಿಂತು
ಮುಂದಿನ ಹಾದಿ ಮರೆತು
ಹೆದರಿ ಕುಳಿತಿಹೆವು ನಾವು...

ತಮ್ಮ ಮನೆಗೆ ತಾವೇ ಬಂದು
ನಿಂದನೆಯ ಕೇಳಿ ನೊಂದು
ಹೆದರಿ ಕುಳಿತಿಹೆವು ನಾವು...



ಸೊಬಗಿನ ತವರು



ಹಸಿರು ಸೊಬಗಿನ ಸಿರಿಯ
ತೆಂಗು ಅಡಿಕೆಯ ಬೆಳೆಯ
ನಡುವಲಿಹುದು ನಮ್ಮೂರು

ಜುಳು ಜುಳು ಹರಿವ ನದಿಯ
ಹಸಿರು ದಿಬ್ಬದ ಕಣಿವೆಯ
ಬದಿಯಲಿಹುದು ನಮ್ಮೂರು

ನವಿಲಿನ ನರ್ತನದ ಸೊಗಡು
ಕೋಗಿಲೆಯ ಇಂಪಾದ ಹಾಡು
ತುಂಬಿರುವ ನಮ್ಮೂರು

ಸುಗುಣ ಸಂಸ್ಕೃತಿಯ ತವರು
ಸುಸಂಸ್ಕೃತರು ತುಂಬಿದ ಊರು
ಪುಣ್ಯಭೂಮಿಯು ನಮ್ಮೂರು

ಶಾಲ್ಮಲೆಯು ಹರಿಯುವಳು ಇಲ್ಲಿ
ಶಿವಗಂಗೆ ಜಲಪಾತ ಧುಮ್ಮಿಕ್ಕಿ ಚೆಲ್ಲಿ
ಕೈ ಬೀಸಿ ಕರೆಯುವ ನಮ್ಮೂರು






ಗುರುಮಾತೆ



ನನ್ನಯ ಮೊದಲ ಗುರುಮಾತೆ
ಅವಳು ನನಗೆ ಜನನಿಯಂತೆ
ತೋರಿದಳು ಪ್ರೀತಿ ಮಮತೆ
ವಿದ್ಯೆ ಕಲಿಸಿದ ಜ್ಞಾನದಾತೆ

ಅಕ್ಷರಮಾಲೆ ಕಲಿಸಿದವಳು
ತಪ್ಪು ತಿದ್ದಿ ಬೆಳೆಸಿದವಳು
ನೀತಿ ಕಥೆಯ ಹೇಳಿದವಳು
ಕರುಣೆಯ ಕಡಲು ಇವಳು

ಬಿದ್ದಾಗ ಕೈಹಿಡಿದು ಎತ್ತಿದವಳು
ನಾ ಗೆದ್ದಾಗ ಸಂಭ್ರಮಿಸಿದವಳು
ಊಟ ಮಾಡಿಸಿದ ತಾಯಿ ಇವಳು
ವಿಶಾಲ ಮಾತೃ ಹೃದಯದವಳು

ಪದಗಳಿಗೆ ನಿಲುಕದ ಶಕ್ತಿ ಇವಳು
ಮನಕೆ ಧೈರ್ಯ ತುಂಬಿದವಳು
ಜೀವನದ ದಾರಿ ತೋರಿದವಳು
ಸತ್ಯ ಮಾರ್ಗದಿ ನಡೆಸಿದವಳು









ಭಾನುವಾರ, ಅಕ್ಟೋಬರ್ 4, 2020

ಸಮಾರಂಭದ ಸಂಭ್ರಮ

ಕರೆ ನೀಡಿದೆ ಮಮತೆಯ ಕರೆಯೋಲೆ
ಸ್ವಾಗತಿಸುತಿದೆ ಮಾವಿನೆಲೆಯ ಮಾಲೆ
ಸಂಭ್ರಮಕೆ ಮೆರುಗು ನೀಡಿದೆ ಬಾಳೆ ಎಲೆ
ಕಣ್ಮನ ಸೆಳೆಯುತಿದೆ ಹೂ ಸಿಂಗಾರದ ಕಲೆ
ಎಲ್ಲೆಲ್ಲೂ ಹರಡಿದೆ ಚೆಲುವಿನಾ ಬಲೆ...

ಅತಿಥಿಗಳಿಗೆ ಕಾದಿದೆ ತಂಪು ಪಾನಕವು
ಘಮಘಮಿಸುತಿದೆ ಲಘು ಉಪಹಾರವು
ನಗು ಮೊಗದ ಮಾತಿನಾ ಸ್ವಾಗತವು
ಕಾಯುತಿದೆ ಮೆತ್ತನೆ ಸುಖಾಸನವು
ಸುತ್ತಲಿನ ಅಲಂಕಾರ ಚಿತ್ತಾಕರ್ಷಕವು...

ಮೊಳಗುತಿದೆ ಇಂಪಾದ ಮಂಗಳ ವಾದ್ಯವು
ರೇಷ್ಮೆ ಸೀರೆಯ ಮಾನಿನಿಯರ ಸೊಗವು
ಜೊತೆಗೆ ಬಂಗಾರದ ಆ ಆಭರಣದ ಲಾಸ್ಯವು
ಎಲ್ಲೆಡೆ ಕಾಣುತಿದೆ ಸವಿ ಸಂಭ್ರಮವು
ಸಭೆಯಲಿ ಗುಜು ಗುಜು ಮಾತಿನ ಸಡಗರವು...

ಹೊರ ಹೊಮ್ಮುತಿದೆ ಅಕ್ಷತೆಯ ರಂಗು
ಮೊಳಗುತಿದೆ ಮಧುರಗಾನದ ಗುಂಗು
ಮನ ಸೆಳೆಯುತಿದೆ ಬೆಳಕಿನಾ ಬೆಡಗು
ವರ್ಣನಾತೀತ ಶುಭಕಾರ್ಯದ ಸೊಬಗು
ಮಂತ್ರ ಶಾಸ್ತ್ರವು ಹೆಚ್ಚಿಸಿದೆ ಮೆರಗು...

ಬಾಕಿ ಉಳಿದಿದೆ ಇನ್ನೂ ಔತಣ ಕೂಟ
ಸಿದ್ಧವಾಗಿದೆ ಇದಕೆ ಹಸಿರು ತೋಟ
ಕೈ ಬೀಸಿ ಕರೆದಿದೆ ಬಾಳೆಲೆಯ ಊಟ
ಸಮಾರಂಭವಿನ್ನು ಇತಿಹಾಸದ ಪುಟ
ಸವಿ ನೆನಪಿಗಾಗಿ ಇರಲಿ ಒಂದು ಪಟ...

ಉಡುಗೊರೆಯ ಶಾಸ್ತ್ರ ಕೊನೆಯಲಿ
ಉಳಿಯಲಿ ಎಂದೆಂದೂ ನೆನಪಿನಲಿ
ಹರಸಿ ಹಾರೈಸಿ ಶುಭ ಕೋರಿಕೆಯಲಿ
ಹಂಚಿದ ಸಿಹಿ ಎಲ್ಲರ ಕರದಲಿ
ಕೊನೆಯಾಗುವುದು ನಿರ್ಗಮನದಲಿ..

ಕೆಚ್ಚೆದೆಯ ಕಲಿ ರಾಯಣ್ಣ

 

ಕ್ರಾಂತಿಕಾರಿ ವೀರ ಸಂಗೊಳ್ಳಿ ರಾಯಣ್ಣ
ಶೌರ್ಯ ಧೈರ್ಯವೇ ಇವನ ಮೈಬಣ್ಣ
ವೀರ ಸಿಪಾಯಿಗಳಿಗೆ ಇವನು ಅಣ್ಣ
ಅಗಸ್ಟ್ ಹದಿನೈದರಂದೆ ಜನಿಸಿದ ರಾಯಣ್ಣ

ಕೆಂಚಮ್ಮಾಜಿ, ಭರಮಪ್ಪನ ಮಗನಿವನು
ಸಂಗೊಳ್ಳಿಯ ವೀರ ಪುತ್ರ ಇವನು
ಕೆಚ್ಚೆದೆಯ ವೀರ ಶೂರ ಕಲಿ ಇವನು
ಬ್ರಿಟೀಷರೊಡನೆ ಹೋರಾಟಕೆ ನಿಂತನು

ಸ್ವಾತಂತ್ರ್ಯ ಸಮರದಿ ಪ್ರಮುಖ ಪಾತ್ರ
ಚೆನ್ನಮ್ಮನಿಗಾದ ಇವನು ವೀರ ಪುತ್ರ
ಹಿಡಿದನು ಸಂಗೊಳ್ಳಿ ಸಾಮ್ರಾಜ್ಯದ ಸೂತ್ರ
ಬ್ರಿಟೀಷರಿಗೆ ನೀಡಿದ ರಣಕೆ ಆಹ್ವಾನ ಪತ್ರ

ಸಾಧುವಿನ ವೇಷದಿ ಸೇರಿ ಸೆರೆಮನೆಯ
ಚೆನ್ನಮ್ಮಾಜಿಗೆ ನೀಡಿ ಭರವಸೆಯ
ಊದಿದನು ಸ್ವಾತಂತ್ರ್ಯದ ಕಹಳೆಯ
ಮುನ್ನಡೆಸಿದನು ಸಂಗೊಳ್ಳಿ ಸೇನೆಯ

ಬ್ರಿಟೀಷರ ಮೋಸಕೆ ಬಲಿಯಾದನು
ವೀರ ಮರಣಕೆ ಶರಣನಾದನು
ಇತಿಹಾಸದ ಪುಟವ ಸೇರಿದನು
ಸಂಗೊಳ್ಳಿ ಮರೆಯಲಾರದ ವೀರನು

ಶಾಸ್ತ್ರೀಜಿ

ಮೊಘಲ್ ಸರಾಯಿಯಲಿ ಜನಿಸಿದ ಈತ
ದಕ್ಷ-ಪ್ರಾಮಾಣಿಕನೆಂಬ ಮಾತು ಜನಜನಿತ
ಬಾಲ್ಯದಲಿ ಹಾಸಿ ಹೊದ್ದ ಬರಿಯ ಬಡತನ
ಬರಿಗಾಲಲೆ ನಡೆದು ಕಳೆದ ಬಾಲ್ಯದ ಜೀವನ

ಗಾಂಧಿಯಿಂದ ಆದನು ಇನನು ಪ್ರಭಾವಿತ
ಸ್ವಾತಂತ್ರ್ಯ ಹೋರಾಟಕೆ ಧುಮುಕಿದನೀತ
ಲಲಿತಾದೇವಿಯೊಂದಿಗೆ ಆಯಿತು ಮದುವೆ
ದೇಶ ಸೇವೆಗೈವ ದೃಢ ನಿರ್ಧಾರದ ನಡುವೆ

ನಾಯಕ ಬ್ರಿಟಿಷ ವಿರೋಧಿ ಚಳುವಳಿಗೆ
ಏಳು ವರ್ಷ ಕಳೆದ ಸೆರೆಮನೆಯೊಳಗೆ
ದೇಶಕೆ ಸಲ್ಲಿಸಿದ ಸೇವೆಯು ಅಪಾರ
ಇಂದಿಗೂ ಪ್ರಸಿದ್ಧ ಶಾಸ್ತ್ರೀ ಸೋಮವಾರ

ಸ್ವಾತಂತ್ರ ಭಾರತದ ಎರಡನೇ ಪ್ರಧಾನಿ
ಶಾಸ್ತ್ರೀ ಎಂಬ ಬಿರುದಾಂಕಿತ ಸ್ವಾಭಿಮಾನಿ
ಮರಣಾನಂತರ ದೊರೆಯಿತು ಭಾರತರತ್ನವು
ದೆಹಲಿಯಲಿ ಸ್ಮಾರಕ ನಿರ್ಮಿಸಿ ಸಮ್ಮಾನವು

ಗಾಂಧೀಜಿ-ಶಾಸ್ತ್ರೀಜಿ ಇಬ್ಬರನು ನೆನೆಯುವ
ಸಪರ್ಪಣಾ ಭಾವದ ರಾಜಕಾರಣಿಗೆ ನಮಿಸುವ
ಜೈ ಜವಾನ್ ಜೈ ಕಿಸಾನ್ ಇವರ ಧ್ಯೇಯವಾಕ್ಯ
ಇವರ ಕಾಲದಲಿ ದೇಶವು ಪ್ರಗತಿಯಲಿ ಔನತ್ಯ

ಜನಸಂಖ್ಯಾ ಸ್ಫೋಟ

ಜನಸಂಖ್ಯಾ ಸ್ಫೋಟ
ಜನಸಂಖ್ಯೆ ಕೋಟಿ ಕೋಟಿ
ಏರುತಿಹುದು ಮಿತಿ ದಾಟಿ
ಎಲ್ಲಡೆಯೂ ಪೈಪೋಟಿ
ಈ ಸಮಸ್ಯೆಗಿಲ್ಲ ಸಾಟಿ

ಎಲ್ಲಿ ನೋಡಿದರೂ ಜನರು
ಸೌಲಭ್ಯ ವಂಚಿತರ ತವರು
ಹಬ್ಬಿದೆ ಸಮಸ್ಯೆಯ ಬೇರು
ಸಿಗುತಿಲ್ಲ ಜನರಿಗೆ ಅನ್ನ ನೀರು

ಶಿಕ್ಷಣದಿ ಇಲ್ಲ ಅವಕಾಶ
ಆರ್ಥಿಕ ಪ್ರಗತಿಯ ನಾಶ
ದೇಶದ ಅಭಿವೃದ್ಧಿ ವಿನಾಶ
ಬರಿದಾಗಿದೆ ದೇಶದ ಕೋಶ

ಮನೆಗೊಂದು ಮಗುವಿರಲಿ
ಮನೆ ತುಂಬ ನಗುವಿರಲಿ
ಮನೆ ಮನೆಯಲೂ ಇರಲಿ
ಜನಸಂಖ್ಯೆ ನಿಯಂತ್ರಣದಲಿ

ಮೂಡಿಸುವ ಎಲ್ಲರಲೂ ಜಾಗೃತಿ
ಹಳ್ಳಿ ನಗರದಲೂ ಹೇಳುವ ನೀತಿ
ಮೀರದಿರಲಿ ಜನಸಂಖ್ಯೆ ಮಿತಿ
ದೇಶದೆಲ್ಲೆಡೆ ಆಗಲಿ ಉನ್ನತಿ









ಬಂಡಾಯ ಕವನ

ಕಾರ್ಮಿಕ

ದುಡಿಯುತಿಹನು ಕೂಲಿಯಾಗಿ
ನೋವು-ದಣಿವನೆಲ್ಲ ನುಂಗಿ
ಕುಟುಂಬದ ಒಪ್ಪತ್ತಿನ ಊಟಕಾಗಿ
ಅಲ್ಲ ದುಡಿಮೆಯು ಶೋಕಿಗಾಗಿ

ದಿನವೂ ಬೆವರು ಹರಿಸುವ
ಕಂಬನಿಯನು ಸುರಿಸುವ
ಕಷ್ಟಗಳ ಹೊದ್ದು ಬದುಕುವ
ಬವಣೆಯಲೆ ಬೇಯುವ

ಕಾರ್ಮಿಕನ ಗೋಳ ಕೇಳುವರಿಲ್ಲ
ಇವನ ಶ್ರಮವನು ಬಲ್ಲವರಿಲ್ಲ
ಆಳುವವರ ದರ್ಪ ತಡೆವರಿಲ್ಲ
ದೌರ್ಜನ್ಯ ಮಿತಿ ಮೀರಿದೆಯಲ್ಲ

ದೇಶದ ಬೆನ್ನೆಲುಬು ಕಾರ್ಮಿಕರು
ಅವರು ನಮ್ಮಂತೆ ಮನುಜರು
ಆಗದಿರಲಿ ಅವಕಾಶ ವಂಚಿತರು
ಬದುಕಿ ಬಾಳಲಿ ನಮ್ಮಂತೆ ಇವರು



ಮುಂಜಾನೆಯ ಮಳೆ

ಮುತ್ತಿನ ಹನಿಗಾಗಿ ಕಾಯ್ವ ಇಳೆ
ಮುಂಜಾನೆಯ ಸೋನೆ ಮಳೆ
ತೊಳೆಯಿತೆಲ್ಲ ಇಳೆಯ ಕೊಳೆ
ಜನಿಸಿತಾಗ ಹಚ್ಚಹಸಿರ ಬೆಳೆ

ಹಸಿರ ಸೀರೆಯುಟ್ಟ ಭುವಿ
ನಾಚಿ ನೀರಾದಳು ಬರಲು ರವಿ
ಹೊಂಗಿರಣದ ಸ್ಪರ್ಶದ ಸವಿ
ಕೇಳುತಿದೆ ಪ್ರೇಮರಾಗದ ಪಲ್ಲವಿ

ಹಾಲಿನಂತೆ ಹರಿವ ನೀರ ಝರಿ
ಎಂಥ ಚಂದ ಭೂರಮೆಯ ಸಿರಿ
ತೆರೆದಂತಿದೆ ಸ್ವರ್ಗದ ದಾರಿ
ಅದಕೆ ನಿಲುಕದ ಸೊಬಗ ವೈಖರಿ

ಸಕಲ ಜೀವರಾಶಿಗಿದುವೆ ನೆಲೆ
ಅದ್ಭುತ ದೇವ ಸೃಷ್ಟಿಯ ಕಲೆ
ಬೆಳಗಿದುವೆ ಚೈತನ್ಯದ ಸೆಲೆ
ರಮ್ಯತೆಗೆ ಕಟ್ಟಲಾದೀತೆ ಬೆಲೆ??

ನಿಲ್ಲಲಿ ಶೋಷಣೆ

 ಬಂಡಾಯ ಕವನ

ಕಾರ್ಖಾನೆಯಲಿ ಬೆವರು ಹರಿಸಿ
ತೋಳ ಬಲವ ಬಂಡವಾಳವಾಗಿಸಿ
ಮೈಯ ಮೂಳೆಯನು ಸವೆಸಿ
ದುಡಿವ ನಮ್ಮ ಕಡೆ ಗಮನ ಹರಿಸಿ

ಅನ್ನ ಬಟ್ಟೆಗಾಗಿ ನಮ್ಮ ಶ್ರಮವೂ
ನಮ್ಮ ದುಡಿಮೆ ನಂಬಿಹ ಕುಟುಂಬವೂ
ಕೆಲಸ ಇಲ್ಲವಾದರೆ ಇಲ್ಲ ಊಟವೂ
ಶೋಕಿಗಾಗಿ ಅಲ್ಲ ನಮ್ಮ ಕೆಲಸವೂ

ನೀವು ಬೆಳೆಯಲು ಬೇಕು ನಾವುಗಳು
ನೀಡಿ ನಮಗೂ ನಮ್ಮ ಸೌಲಭ್ಯಗಳು
ಆಗಲಿ ಒಳ್ಳೆಯ ಬದಲಾವಣೆಗಳು
ದೂರಾಗಲಿ ಕಾರ್ಮಿಕರ ಬವಣೆಗಳು

ಬಡವರೆಂದು ಶೋಷಿಸದಿರಿ ನಮ್ಮನು
ನೀಡಿ ನಮಗೆ ನಮ್ಮಯ ಹಕ್ಕನು
ಜೊತೆಗೆ ನಮ್ಮ ಶ್ರಮಕೆ ಗೌರವವನು
ಹಸನುಗೊಳಿಸಿ ನಮ್ಮ ಬದುಕನು

ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ 
27/07/2020

ಮನುಜ ಕುಲವೊಂದೆ

ಬಂಡಾಯ ಕವನ

ಕರಿಯರೆಂದು ಕೂಗಿ ಜರಿಯಬೇಡಿ
ಎಲ್ಲರೂ ಮನುಜರೇ ಮರೆಯಬೇಡಿ
ನಮಗೂ ಒಂದು ಬದುಕಿದೆ ಕಾಡಬೇಡಿ
ಎಲ್ಲೆಡೆಯೂ ಬೇಧ-ಭಾವ ಮಾಡಬೇಡಿ

ಕರಿಯ ಬಣ್ಣಕೂ ಇದೆ ಅದರದೆ ಬೆಲೆ
ಕರಿಯರಿಗೂ ಇದೆ ಅವರದೆ ಆದ ನೆಲೆ
ಕಿತ್ತುಕೊಳ್ಳಬೇಡಿ ನೀರು, ಅನ್ನದ ಒಲೆ
ದೇವನೊಬ್ಬ ನೋಡುತಿರುವ ಮೇಲೆ

ಶಾಶ್ವತವಲ್ಲ ಗಳಿಸಿದ ಹಣ ಸಂಪತ್ತು
ಬದಲಾಗುತಲಿಹುದು ಈ ಜಗತ್ತು 
ನಿಮ್ಮ ಸ್ಥಾನಕೂ ಬರಬಹುದು ಕುತ್ತು
ನಂಬಿ ಬದುಕುವವರು ನಾವು ನಿಯತ್ತು

ಬಣ್ಣದಲಿ ಹೆಚ್ಚುಗಾರಿಕೆ ಏನಿದೆ ಅಣ್ಣ 
ಜಗದ ಮನುಜರೆಲ್ಲ ಒಂದೇ ಅಣ್ಣ 
ನಮ್ಮಲಿ ಮೇಲು ಕೀಳು ಬೇಡ ಅಣ್ಣ 
ಎಲ್ಲರ ರಕ್ತದ ಬಣ್ಣ ಒಂದೇ ಅಣ್ಣ 

ನಮಗೂ ಬದುಕು ಬಿಡಿ ದಯಮಾಡಿ
ನಮ್ಮ ಅನ್ನವ ಕಿತ್ತು ಕಿತ್ತು ತಿನ್ನಬೇಡಿ
ನಮದೂ ಈ ಭೂಮಿ ಬದುಕಗೊಡಿ
ಹಕ್ಕು ಕಸಿದು ಸಮಾಧಿ ಮಾಡಬೇಡಿ

ನವಪರ್ವ ಫೌಂಡೇಶನ್ : ಉತ್ತಮ ಸ್ಥಾನ 
13/07/2020

ಶನಿವಾರ, ಅಕ್ಟೋಬರ್ 3, 2020

ನವ ವಧು

ನವವಧು

ಹುಟ್ಟಿ ಬೆಳೆದಾ ಮನೆಯ ಬಿಟ್ಟು
ಒಡಹುಟ್ಟಿದವರನೂ ಬಿಟ್ಟು
ಜನ್ಮವಿತ್ತ ದೇವರುಗಳ ಬಿಟ್ಟು
ಒಡನಾಡಿಗಳನೆಲ್ಲ ಬಿಟ್ಟು

ಅಕ್ಕರೆಯ ಸೇರನು ಒದ್ದು ಬಂದಳು
ಸೊಸೆಯಾಗಿ ಹೊಸ ಮನೆ ಸೇರಿದಳು
ಮಡದಿಯೆಂಬ ಪಟ್ಟವ ಏರಿದಳು
ಹೊಸ ಕನಸಗಳ ಕಂಗಳಲಿ ಕಂಡಳು

ಅಲ್ಲಿ ಕೂತರೆ ಅತ್ತೆ ಏನೆನ್ನುವರು
ಇಲ್ಲಿ ನಿಂತರೆ ಮಾವ ಏನೆನ್ನುವರು
ಅಡಿಗೆಯೂ ಬಾರದು ಚೂರು-ಪಾರು
ಕ್ಷಣವೂ ನೆನಪಾಗುತಿಹುದು ತವರು

ಇನ್ನು ಹೇಗಿರುವನೋ ಪತಿರಾಯ
ಆಗುವನೆ ಇವನು ಮನದ ಇನಿಯ
ಆಷಾಢ ಬರಲು ಸೇರಿ ತೌರು ಮನೆಯ
ಹಾಡುತಲಿ ಕಹಿ ವಿರಹದಾ ಗೀತೆಯ

ಬರಲು ಶ್ರಾವಣ ಸೇರಿ ಪತಿಗೃಹವನು
ಪೂಜಿಸಿ ವರ ಮಹಾಲಕ್ಷ್ಮೀಯನು
ಬೇಡಿ ಸಂಸಾರ ಸುಖ, ಸಂತಾನವನು
ಸಾಮರಸ್ಯದಿ ಕೂಡಿ ಬಾಳು ಹಸನು

ಶುಕ್ರವಾರ, ಅಕ್ಟೋಬರ್ 2, 2020

ನುಡಿ ನಮನ

ನುಡಿ-ನಮನ
ಕೆಚ್ಚೆದೆಯ ಯೋಧರಿಗೆ
ಎದೆಯಾಳದಿಂದ ನಮನಾ
ಸಮರದ ಕಲಿಗಳಿಗಿದೋ
ಅರ್ಪಿಸುವೆವು ವಂದನಾ...

ಪ್ರಾಣವನೆ ಪಣಕಿಟ್ಟು
ದೇಶವನು ಕಾಯುವರು
ಜನ್ಮಭೂಮಿ ರಕ್ಷಣೆಗೆ
ಕುಟುಂಬವನೇ ತೊರೆದರು...

ನಮ್ಮ ನೆಮ್ಮದಿಯ ಹೊಣೆಯ
ತಮ್ಮ ಹೆಗಲ ಮೇಲೆ ಹೊತ್ತರು
ಶತ್ರುವಿನೊಡನೆ ಸೆಣೆಸಾಡಿ
ಜಯಿಸಿ ಹರಿಸಿ ತಮ್ಮ ನೆತ್ತರು...

ನಮ್ಮ ಭರತ ಭೂಮಿಯ
ಹಮ್ಮೆಯ ವೀರ ಪುತ್ರರು
ಕಾಡು-ಮೇಡು ಲೆಕ್ಕಿಸದೇ
ಹೋರಾಟಕೆ ನಿಂತರು...

ಎಂದೆಂದಿಗೂ ಅಮರವಾಗಿದೆ
ಅವರ ತ್ಯಾಗ ಬಲಿದಾನವು
ಕೆಚ್ಚೆದೆಯ ವೀರರ ಶೌರ್ಯ
ಮಾತೃ ಭೂಮಿಗೆ ವರದಾನವು..

ಕಾರ್ಗಿಲ್ ವಿಜಯ ದಿವಸ
ಹೆಮ್ಮೆಯಿಂದ ಆಚರಿಸುವ
ಹುತಾತ್ಮ ಯೋಧರನು
ಗೌರವದಿ ಸಂಸ್ಮರಿಸುವ...

ಹೃದಯದಿಂದ ಹೊಮ್ಮಲಿ
ವೀರರಿಗೆ ಭಾವಾಂಜಲಿ
ಕರಮುಗಿದು ಶಿರಬಾಗಿ
ಸಮರ್ಪಿಸುವ ಶೃದ್ಧಾಂಜಲಿ...