ಗುರುವಾರ, ಸೆಪ್ಟೆಂಬರ್ 2, 2021

ಮಳೆ ಮತ್ತು ನೆನಪುಗಳು


06/08/2021 - ಕ್ರಾಂತಿಧ್ವನಿ

ಆಹಾ ಎಂಥ ಸೊಗಸು ಮಳೆಯ ಮಲೆನಾಡು
ಜೀವನದಿ ಒಮ್ಮೆಯಾದರೂ ಇದನು ನೋಡು
ಇಲ್ಲಿದೆ ಸಾವಿರ ಸವಿಸವಿ ನೆನಪುಗಳ ಜಾಡು
ಮಲೆನಾಡು ನನ್ನಯ ಒಲುಮೆಯ ಗೂಡು

ಕೆಸುವಿನ ಎಲೆಯ ಮೇಲೆ ಮುತ್ತಿನ ನೀರ ಹನಿ
ನಡು ರಾತ್ರಿಯಲೂ ಕಪ್ಪೆಗಳ ಕರಕರ ದನಿ
ಮಳೆಯಲಿ ಹಸಿರು ಹಾಸು ಹಾಸಿದ ಅವನಿ
ಆಹಾ!! ಇದು ನನ್ನ ಮಳೆಯ ಮಲೆನಾಡು

ಮರದ ಮೇಲಿನ ಸೀತಾಳೆ ಹೂವ ಸೊಬಗು
ಸುತ್ತಲೂ ನೆಟ್ಟ ಗದ್ದೆಯ ಹಸಿರಿನ ಮೆರಗು
ಧೋ ಎಂದು ಕೂಗುವ ಜಲಪಾತದ ಬೆರಗು
ಆಹಾ!! ಇದು ನನ್ನ ಮಳೆಯ ಮಲೆನಾಡು

ಕಾಲಿಟ್ಟರೆ ಮಿಜಿಗುಡುವ ಉಂಬಳದ ಕಾಟ
ಸಾಲಾಗಿ ತೊಟ್ಟಿಕ್ಕುವ ಮುತ್ತಿನ ಹನಿ ನೋಟ
ಹಳ್ಳಿಯ ಮಕ್ಕಳ ಮೋಜಿನ ನೀರಾಟ
ಆಹಾ!! ಇದು ನನ್ನ ಮಳೆಯ ಮಲೆನಾಡು

ನೆನಪುಗಳ ನರ್ತನ

ನೆನಪುಗಳ ನರ್ತನ

ಜಿಟಿ ಜಿಟಿ ತಂಪಾಗಿ
ಮಳೆಯು ಸುರಿಯುತಿದೆ
ಮನದಿ ತಿರುಗಿ ತಿರುಗಿ
ನಿನ್ನ ನೆನಪು ಕಾಡುತಿದೆ
ಮನ ಮರುಗಿ ಮರುಗಿ
ವಿರಹ ಮೂಡುತಿದೆ

ಬನದಿ ನಗುವ ಗುಲಾಬಿಯ
ಬಿಸಿಲ ಧಗೆಗೆ ಮುದುರಿದೆ
ಬಾನೆತ್ತರಕೆ ಹಾರುವ ಹಕ್ಕಿ
ಗೂಡಲಿ ಮುದುಡಿ ಕುಳಿತಿದೆ
ನಗುವ ಮನವು ಈಗ
ಮಾತಿಲ್ಲದೇ ಮೂಕವಾಗಿದೆ

ಮಾಸದ ನೆನಪುಗಳು
ಮನದಿ ನರ್ತನ ಮಾಡಿದೆ
ಸಮಾಧಿಯೊಳಗಿನ ಭಾವ
ಮತ್ತೆ ಜೀವವ ಪಡೆದಿದೆ
ಭಾವದ ಅಲೆಯೊಳಗೆ
ಜೀವ ಸಿಲುಕಿ ನಲುಗಿದೆ

ಬುಧವಾರ, ಆಗಸ್ಟ್ 4, 2021

ವಿಜಯಾನಂದದ ಸವಾರಿ

06/08/2021 - ಕ್ರಾಂತಿಧ್ವನಿ

ಸವಾರಿ ಹೊರಟೆ ವಿಜಯಾನಂದ ಬಸ್ಸಿನಲ್ಲಿ
ಬಹು ಆನಂದವಾಯಿತು ನನಗೆ ಮನದಲ್ಲಿ
ಕುಳಿತೆ ಮುದದಿಂದ ಕಿಟಕಿ ಪಕ್ಕದ ಸೀಟಿನಲ್ಲಿ
ಮೊದಲ ಪಯಣವು ನನದು ಈ ಬಸ್ಸಿನಲ್ಲಿ

ಮೆಲುವಾದ ಸಂಗೀತ ಕೇಳುತ ಸಾಗಿತು ಪಯಣ
ನೋಡುತ ಮೈಯನು ಮರೆತೆ ಹಸಿರಿನ ತಾಣ
ಆಗಲೇ ಬಂದಿತು ಊಟ ಮಾಡುವ ನಿಲ್ದಾಣ
ಇಳಿದೆ ತೆಗೆದುಕೊಂಡು ಊಟಕೆ ಬೇಕಾದ ಹಣ

ಊಟವನು ಮುಗಿಸಿ ಬಂದೆ ಏರಲು ಬಸ್ಸನು
ಕಾಣದೇ ಬೋರ್ಡ್ ನು ಆದೆ ನಾನು ಮಂಗನು
ನೋಡಿ ದಂಗಾದೆ ಒಂದೇ ರೀತಿಯ ಬಸ್ಸನು
ಏನೂ ಮಾಡಲು ತೋಚದೇ ಹುಡುಕಿದೆ ಬಸ್ಸನು

ಯಾವ ಬಸ್ಸಿಗೂ ಬರೆದಿಲ್ಲವು ಊರ ಹೆಸರು
ನನಗೆ ನಿಂತ ಹಾಗಾಯಿತು ಒಮ್ಮೆಲೇ ಉಸಿರು
ಪರದಾಟವನು ನೋಡಿ ಕೇಳಿದರು ಒಬ್ಬರು
ಪರಿಸ್ಥಿತಿ ಅರಿತು ಸಹಾಯಕೆ ಬಂದರು ಅವರು

ನೋಡಿ ನಿಮ್ಮ ಬಸ್ಸಿನ ನಂಬರು ಇಲ್ಲ ಇಲ್ಲಿ ಹೆಸರು
ಆಗ ನೋಡಿದೆ ಟಿಕೇಟಿನಲ್ಲಿ ನನ್ನ ಬಸ್ಸಿನ ನಂಬರು
ಅಷ್ಟರಲ್ಲಿ ಬಸ್ಸಿನ ನಿರ್ವಾಹಕರು ಸಹ ಬಂದರು
ಇದು ನನ್ನ ಮೊದಲ ಪಯಣ ಕೇಳಿ ನೀವೆಲ್ಲರೂ

ವೇದಾವತಿ ಭಟ್ಟ
ಮುಂಬೈ 

ಬುಧವಾರ, ಜುಲೈ 14, 2021

ಜೀವ ಜೀವನ


ಜೀವವು ಇದ್ದರೆ ಜೀವನ ಎನ್ನುವಂತಾಗಿದೆ ಸ್ಥಿತಿ ಇಂದು
ಜೀವಿಯ ಜೀವದ ಜೊತೆ ಆಟವಾಡಿದ ಮನುಜ ಅಂದು
ಸ್ವಾರ್ಥದ ಜೀವನವು ಬೇಡ ಹೇ ಮನುಜ ಎಂದೆಂದೂ
ಯೋಚಿಸಿ ಕೆಲಸವನು ಮಾಡುವ ಹಿಂದು-ಮುಂದು

ಎಲ್ಲ ಜೀವರಾಶಿಗೂ ಜೀವ-ಜೀವನವು ಬಲು ಪ್ರಧಾನ
ಇದ ಅರಿತು ನಡೆ ಮನುಜ ಎಲ್ಲರೂ ಒಂದೇ ಸಮಾನ
ಕೈಲಾಗದವೆಂದು ಶೋಷಿಸದಿರು ನೀ ಅನುದಿನ
ಪ್ರತೀಕಾರ ತೀರಿಸಲು ಬಂದಿದೆ ನೋಡು ಸಣ್ಣ ಕೊರೋನ

ಕ್ಷಣದಲೇ ಬದಲಾಗಿ ಹೋಯಿತು ನಮ್ಮಯ ಜೀವನ
ಜೀವ ಭಯದಿಂದ ನಾಲ್ಕು ಗೋಡೆಯೊಳಗೆ ಬಂಧನ
ಮನುಜನ ಕಾಟ ಇಲ್ಲದೇ ಪ್ರಕೃತಿಗೆ ಅಮೃತ ಸಿಂಚನ
ಆದರೆ ನಮ್ಮ ಬದುಕು ಭಯದ ನೆರಳಲಿ ಅನುದಿನ

ಬೇಡವೇ ಬೇಡ ನೈಸರ್ಗಿಕ ಹಸಿರು ಪರಿಸರದ ನಾಶ
ನಗರೀಕರಣ ಆಧುನೀಕರಣದಿಂದಲೇ ನಮ್ಮ ವಿನಾಶ
ಹಣ ಹಿಂದೆ ಓಡುತ ಹಾಕಬೇಡ ಬಗೆಬಗೆಯ ವೇಷ
ಕಳೆದುಕೊಳ್ಳಬೇಡ ಈ ಕ್ಷಣದ ಜೀವನದ ಸಂತೋಷ

ಗುರುವಾರ, ಜುಲೈ 8, 2021

ದೇವಾ..

ಜೀವ ಜೀವನವೂ ನಿನದೇ ದೇವಾ
ಅರ್ಪಿಸುವೆ ಶುದ್ಧ ಮನದಿ ಹೂವಾ

ಪರಿಪರಿ ಕಷ್ಟದಲಿ ಬಳಲಿದೆ ಈ ಜೀವಾ
ಬಿಚ್ಚಿಡುವೆ ಮನದಿ ಅಡಗಿದ ನೋವಾ
ಪರಿತಾಪವ ಪರಿಹರಿಸು ನೀ ದೇವಾ
ಸಂತೈಸು ಬಳಲಿರುವ ಈ ಮನವಾ

ಬೇಸರವೀ ಜೀವನದ ಯಾನ
ಸಹಿಸಲಾರೆ ನೀರಸವಾದ ಮೌನ
ಕಂಗಳಲಿ ನೋವಿನದೇ ಕಥನ
ಮನದಿ ಮೂಡಿದೆ ಕಣ್ಣೀರ ಕವನ

ಮೂರು ದಿನದ ನಮ್ಮ ಜೀವನವು
ಆಸೆಯಲೆಯ ಮೇಲೆ ಪಯಣವು
ಅಪರಿಮಿತ ಅಮೂರ್ತ ಭಾವವು
ಭರವಸೆಯಲಿ ಸಾಗುತಿದೆ ಜೀವನವು


ವೇದಾವತಿ ಭಟ್ಟ 
ಮುಂಬೈ 

ಬುಧವಾರ, ಜುಲೈ 7, 2021

ಬಣ್ಣದ ಓಕುಳಿ

ಬಣ್ಣದ ಓಕುಳಿ

ಬಂದಿತು ಕಾಮನ ಸುಡುವ ಹಬ್ಬ ಹೋಳಿ
ಸಂತಸವ ತುಂಬಿ ತಂದಿದೆ ಬಣ್ಣಗಳ ಓಕುಳಿ
ಬಣ್ಣಗಳ ಸಂಗಮದಿ ಸಂಭ್ರಮದ ಕಚಗುಳಿ
ನವ ಹುರುಪಲಿ ಮತ್ತೆ ಬರುವುದು ಮರಳಿ

ಬದುಕಿನ ಹಾದಿಯಲಿ ಭಾವಗಳ ಸಮಾಗಮ
ಒಂದೊಂದು ಭಾವವೂ ಒಂದೊಂದು ಬಣ್ಣ
ಹೋಳಿಯಲಿ ಬಗೆ ಬಗೆಯ ಬಣ್ಣಗಳ ಸಂಗಮ
ಕಾಮನಬಿಲ್ಲನೇ ಭುವಿಗಿಳಿಸಿತು ಈ ಬಣ್ಣ

ವರುಷಕ್ಕೊಮ್ಮೆ ಹರುಷವನು ತುಂಬುತಲಿ
ರಾಧೆ-ಶ್ಯಾಮರ ನೆನಪು ತರಿಸುತಲಿ ಬಂದಿತು
ಒಂದಾಗಿ ಬಾಳುವ ಐಕ್ಯತೆಯನು ಸಾರುತ
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು

ವಸಂತನ ಸ್ವಾಗತಿಸುವ ಹುಣ್ಣಿಮೆಯ ಹಬ್ಬ
ರಂಗುರಂಗಿನ ಬಣ್ಣಗಳ ಲಾಸ್ಯವು ಸುಂದರ
ಎಲ್ಲರನೂ ಒಗ್ಗೂಡಿಸುತ ದ್ವೇಷ-ರೋಷ
ನೋವು ಮರೆಸುತಲಿ ಖುಷಿಯ ಹಂದರ

ವೇದಾವತಿ ಭಟ್ಟ
ಮುಂಬೈ





ಪ್ರಕೃತಿ ಮಾತೆಯ ಕೂಗು

ಪ್ರಕೃತಿ ಮಾತೆಯ ಕೂಗು

ಇತ್ತೊಂದು ಕಾಲದಿ ಸುತ್ತಲೂ ಹಸಿರು
ಬೇಕಾಗಿರಲಿಲ್ಲ ಅಂದು ಸ್ವಾರ್ಥದ ಹೆಸರು
ಆಡಿಸಬಹುದಿತ್ತು ಸ್ವಚ್ಛಂದದ ಉಸಿರು
ಕೈ ಕೆರಾದರೆ ಬಾಯಿಗೆ ಸಿಗುತ್ತಿತ್ತು ಮೊಸರು

ಬದಲಾಯಿತು ನೋಡು ನೋಡುತಲೇ ಕಾಲ
ಆವರಿಸಿತು ಮನುಜನಿಗೆ ಹಣವೆಂಬ ಜಾಲ
ಆಸೆಯಿಂದ ಕೂಡಿದ ಮನದ ಬೆಂಬಲ
ಭ್ರೂಣದಲೇ ಹಸಿರು ಹತ್ಯೆ ಮಾಡುವ ಕಾಲ

ಕೇಳುವವರಿಲ್ಲ ಪ್ರಕೃತಿ ಮಾತೆಯ ಗೋಳನು
ಅವಳ ರೋಧನವು ಮುಟ್ಟಿತು ಮುಗಿಲನು
ಭವಿಷ್ಯದ ಚಿಂತೆ ಇಲ್ಲದ ಕಪಟಿ ಮಾನವನು
ಸ್ವಾರ್ಥಕಾಗಿ ಎಲ್ಲವನು ಹಾಳು ಮಾಡಿಹನು

ಅರಿತು ನಡೆದರೆ ಈ ಬದುಕು ಬಂಗಾರ
ಹಸಿರಿನ ಜೊತೆಗಿನ ಬದುಕೇ ಸುಂದರ
ಮತ್ತೆ ಹರಡುವ ಎಲ್ಲೆಲ್ಲೂ ಹಸಿರಿನ ಹಂದರ
ಸುತ್ತ ಹಸಿರು ಇರಲು ಬೇಡ ಬೇರೆ ಸಿಂಗಾರ

ಮುಂಗಾರಿನ ಲಾಸ್ಯ

ಮುಂಗಾರ ಹಸಿರು ಲಾಸ್ಯ

ಬಂದಿದೆ ಮುಂಗಾರು ಮಳೆ
ತಂಪಿನಲಿ ತೊಯ್ದಿತು ಇಳೆ
ತೊಳೆಯಿತು ಇಳೆಯ ಕೊಳೆ
ನಳನಳಿಸುತಿದೆ ಹಸಿರು ಬೆಳೆ

ಮುತ್ತಿನ ಹನಿಯ ಸಿಂಚನ
ತಂಪಾಗಿ ಹಿಗ್ಗಿದೆ ಮೈ-ಮನ
ಎಲ್ಲೆಲ್ಲೂ ಹಸಿರಿನ ಜನನ
ಇಳೆಯೀಗ ಇಂದ್ರನ ನಂದನ

ಜಲಲ ಧಾರೆಯ ಸವಿಗಾನ
ಕಳಚಿದೆ ಬೀಜದ ಬಂಧನ
ಹಸಿರು ಸಸಿಗಳದೇ ನರ್ತನ
ಹಲವು ಭಾವಗಳ ಜನನ

ಎಲ್ಲೆಲ್ಲೂ ಚಿಗುರು ಚಿಗುರಿದೆ
ಭುವಿಯು ಬಣ್ಣವಾಗಿದೆ
ತಂಗಾಳಿಯ ತಂಪು ಹರಡಿದೆ
ಮುಂಗಾರು ಮುದವ ತಂದಿದೆ

ಸತ್ಯಾಗ್ರಹ

ಹೂಡಿದೆ ಪ್ರಕೃತಿಯು ಸತ್ಯಾಗ್ರಹ
ಮುಂದಿಟ್ಟಿದೆ ತನ್ನಯ ಆಗ್ರಹ
ತತ್ತರಿಸಿದೆ ಭುವಿಯೆಂಬ ಗ್ರಹ
ಪಣವಾಗಿದೆ ಮನುಜನ ದೇಹ

ಹಿಂದೆ ಪರದಾಡಿತ್ತು ಜೀವರಾಶಿ
ತುಂಬಿತು ಮನುಜನ ಪಾಪದ ರಾಶಿ
ಇಂದು ಎಲ್ಲೆಲ್ಲೂ ಹೆಣದ ರಾಶಿ
ಕೊನೆಯಾಯ್ತು ಮನುಜನ ಖುಷಿ

ಗಾಳಿಗೆ ತೂರಿದ ಮೌಲ್ಯಗಳು, ನೀತಿ
ಸ್ವಾರ್ಥದ ಇರಬೇಕಿತ್ತು ಒಂದು ಮಿತಿ
ಮೀರಿದಾಗ ಒದಗಿ ಬಂತು ಈ ಗತಿ
ಹಣದಾಸೆಯು ಆಗಬಾರದು ಅತಿ

ಬದುಕಾಗಿದೆ ಇಂದು ಬಲು ದುಸ್ಥರ
ನಾಲ್ಕು ಗೋಡೆಯ ನಡುವೆ ಬೇಸರ
ಎಲ್ಲೆಡೆಯಲೂ ಕೇಳಿದೆ ಹಾಹಾಕಾರ
ಸಂಬಂಧಗಳು ಆದವು ಬಹುದೂರ

ಇನ್ನಾದರೂ ಬದಲಾಗಲಿ ಜೀವನ
ಸ್ವಾರ್ಥವ ತೊರೆದರೆ ಅದು ನಂದನ
ಕಳಚಲಿ ಸಕಲ ಪಾಪಗಳ ಬಂಧನ
ಜೀವನವಾಗಲಿ ಮುಂದೆ ವಿನೂತನ

ವೇದಾವತಿ ಭಟ್ಟ
ಮುಂಬೈ 

ಮೊದಲ ಮಳೆಯ ಪುಳಕ


ಮೊದಲ ಮಳೆಯ ಪುಳಕ ಮನಕೆ
ಮಯೂರಕೆ ನರ್ತನದ ಸುಬಯಕೆ
ಭುವಿಯು ಹಸಿರು ಸೀರೆಯ ಕನ್ನಿಕೆ
ನಯನಕೆ ಸ್ವರ್ಗವು ಬೇರೆ ಏತಕೆ??

ಸುರಿಯುತಿದೆ ಬಿಡದೆ ವರ್ಷಧಾರೆ
ಸುತ್ತಲೂ ಹರಿದಿದೆ ಜಲಲಧಾರೆ
ಇನಿತು ಸೊಬಗು ನಮ್ಮ ವಸುಂಧರೆ
ಇನಿಯನ ಕಾಯುವ ಈ ಮನೋಹರೆ

ಭಾರವಾಗಿದೆ ಹನಿಯಿಂದ ಮುಗಿಲು
ಹಸಿರು ಗಿಡದ ಮೇಲೆ ಹನಿ ಸಾಲು
ಎತ್ತ ನೋಡಿದರೂ ಹಸಿರು ಫಸಲು
ಆಘ್ರಾಣಿಸಲು ಮಣ್ಣಿನ ಈ ಘಮಲು

ವೇದಾವತಿ ಭಟ್ಟ
ಮುಂಬೈ 

ಬದುಕು


ಬದುಕೊಂದು ವಿಸ್ಮಯದ ಗೂಡು
ಕೆದಕಿದರೆ ಬಲು ಅದ್ಭುತಗಳ ಜಾಡು
ಬೆದರದೆ ಮುಂದಮುಂದಕೆ ಓಡು
ಹಿಂದಿರುಗಿ ಇತಿಹಾಸವ ನೋಡು

ಬಂಧನಗಳು ಬಾಳಲಿ ಹಲವು
ಚಂದದಲಿ ಇರುವವು ಕೆಲವು
ಸುಂದರವು ಈ ಬಾಂಧವ್ಯವು
ನಂದನವಾಗಲಿ ಈ ಜೀವನವು

ಕಷ್ಟಗಳು ಬಂದು ಹೋಗುವವು
ನಷ್ಟಗಳು ಇದ್ದೇ ಇರುವವು
ಇಷ್ಟವಾದುದೆಲ್ಲ ಸಿಗಲಾರವು
ಎಷ್ಟು ವಿಚಿತ್ರ ಈ ಜೀವನವು

ಸವಿ ನೆನಪುಗಳ ಜೀವನದಲಿ
ಸವಿಯುತ ಸಾಗವ ನಾವಿಲ್ಲಿ
ನಲಿವು ನೋವಿನ ಯಾನದಲಿ
ಬಲವು ತುಂಬಿ ಗೆಲುವಾಗಿರಲಿ

ವೇದಾವತಿ ಭಟ್ಟ
ಮುಂಬೈ 

ಮೌನ

ಮಾತೇ ಬಾರದ ನೀರಸ ಮೌನ
ಅತೀ ಬೇಸರವೆನಿಸಿದೆ ಜೀವನ ಯಾನ
ಬದುಕಾಗಿದೆ ಬರಿಯ ಕಹಿಯ ಹೂರಣ
ಎತ್ತಲೋ ಸಾಗಿದೆ ಬದುಕಿನ ಪಯಣ...

ಕಾಣದ ಕೈಯ ಆಟದಿ ಶೂನ್ಯ ಬದುಕು
ಮರೀಚಿಕೆಯಂತೆ ಸುಖವ ಹುಡುಕು
ಹಿತಬಯಸುವರು ಶತ್ರುಗಳ ಸಮಾನ
ಆಸೆ ಕನಸೆಲ್ಲವೂ ಬರೀ ಗಗನ ಕುಸುಮ...

ತಿರುಗಿದರೆ ಭಯಹುಟ್ಟಿಸುವ ಕರಾಳ ಮುಖ
ದಿಕ್ಕೆಟ್ಟ, ಕಂಗೆಟ್ಟ, ಕಾಂತೀಹೀನತೆ, ಸೂತಕ
ನಿರಾಸೆಯ ಮೃತ್ಯುಕೂಪದಲಿ ಬೆಂದ ಮನಸು
ಕೊಲೆಯಾಗಿದೆ ಕಂಡ ಎಲ್ಲ ಸಿಹಿ ಕನಸು

ನಂಬಿಕೆ ಎಂಬ ಪದಕೆ ಇಲ್ಲವು ಇಲ್ಲಿ ಬೆಲೆಯು
ಬೆನ್ನ ಹಿಂದೆ ಮೋಸ ವಂಚನೆಯ ಬಲೆಯು
ನಂಬಿದವರೇ ಬೆನ್ನಿಗೆ ಹಾಕುವರು ಚೂರಿ
ಜೊತೆಗೆ ವಿಧಿಯೂ ಆಗಿದೆ ಬಲು ಕ್ರೂರಿ

ಬೇಯುತಿದೆ ಜ್ವಾಲಾಮುಖಿಯ ಜ್ವಾಲೆಯಲಿ
ಮುಳುಗಿದೆ ಸೂತಕದಂತ ಯಾತನೆಯಲಿ
ಬಿಡುಗಡೆ ದೊರೆತರೂ ಧಿಕ್ಕರಿಸುವಂತಾಗಿದೆ
ನೋವಿನ ನಂಜಲ್ಲಿ ಹುದುಗಿ ಪರಿತಪಿಸುತಿದೆ...

ವೇದಾವತಿ ಭಟ್ಟ
ಮುಂಬೈ 

ಆರೋಗ್ಯ

ಎಲ್ಲದಕೂ ನಮಗೆ ಆರೋಗ್ಯ
ಇದುವೇ ಮೊದಲನೆಯ ಭಾಗ್ಯ
ಎಷ್ಟಿದ್ದರೇನು ಸಕಲ ಸೌಭಾಗ್ಯ??
ಎಲ್ಲ ಸವಿಯಲು ಬೇಕು ಆರೋಗ್ಯ

ಅತಿಯಾದರೆ ಸಿರಿ ಸಂಪತ್ತು
ಬರುವುದು ತಾನಾಗಿ ಆಪತ್ತು
ಆಸೆಪಡಬೇಡ ಪರರ ಸ್ವತ್ತು
ಅದಕಾಗಿ ಬೇಡವು ಕಸರತ್ತು

ಮೈಮುರಿದು ನೆಲದಿ ಉತ್ತಿ ಬಿತ್ತು
ಆಗ ದೊರೆಯುವುದು ಸಂಪತ್ತು
ದೇಹಸುಖ ಆತಿಯಾದರೆ ಕುತ್ತು
ಆರೋಗ್ಯಕ್ಕೆ ಬರುವುದು ಆಪತ್ತು

ದೇಹ ಸೌಖ್ಯವಿರಲು ಎಲ್ಲವೂ ಯೋಗ್ಯ
ಬೇಡುವ ಮೊದಲು ಆರೋಗ್ಯ ಭಾಗ್ಯ
ಇದುವೇ ಆಗಿಹುದು ಬಲು ಅನರ್ಘ್ಯ
ಇದು ತಿಳಿ ಮೊದಲು ನೀ ಅಯೋಗ್ಯ..!!

ವೇದಾವತಿ ಭಟ್ಟ
ಮುಂಬೈ 

ಬದಲಾವಣೆ

ಜೀವನವಿತ್ತು ಮೊದಲು ಬಲು ಸೊಗಸು
ಆದರೆ ಈಗ ಪ್ರಕೃತಿಯ ಮುನಿಸು
ಬಂದಿದೆ ಎಲ್ಲೆಡೆ ಕೊರೋನಾ ವೈರಸ್ಸು
ಭಗ್ನವಾಯಿತು ಎಲ್ಲರ ಮನದ ಕನಸು

ನಿತ್ಯದ ಜೀವನಕೂ ಈಗ ಪರದಾಟ
ಬಲ್ಲವರು ಯಾರು ಆ ದೇವನ ಆಟ
ಸಿಗುತ್ತಿಲ್ಲ ಬಡವರಿಗೆ ನಿತ್ಯದ ಊಟ
ಇನ್ನಾದರೂ ಮನುಜ ಕಲಿಯಲಿ ಪಾಠ

ಮನುಜನ ಆಸೆಗೆ ಇಲ್ಲವೂ ಮಿತಿ
ಕೊನೆಯಾಗುತ್ತಿಲ್ಲ ಭೀಕರ ಪರಿಸ್ಥಿತಿ
ಎಲ್ಲೆಡೆ ಆವರಿಸಿದೆ ರೋಗದ ಭೀತಿ
ಎಂದು ಬದಲಾಗುವುದು ಈ ಸ್ಥಿತಿ??

ವೇದಾವತಿ ಭಟ್ಟ
ಮುಂಬೈ



ಹಸಿರು

ಬೆಳೆಯುವ ಸಿರಿ ಮೊಳಕೆಯಲಿ
ಹಸಿರು ಸಸಿ ಮುಗ್ಧ ಮನದ ಕೈಲಿ
ಮಗುವ ಆರೈಕೆಯಲಿ ಮರವಾಗಲಿ
ಹಸಿರು ನಮಗೆಲ್ಲ ಉಸಿರಾಗಲಿ

ನೀತಿ ಪಾಠ ಮುಗ್ಧ ಮನಕೆ ಬೇಕು
ನೆಟ್ಟ ಸಸಿಗೆ ನೀರು ಗೊಬ್ಬರ ಬೇಕು
ಆಗ ಮಾತ್ರವೇ ಹಸನು ಬದುಕು
ಗಿಡ ಮರಗಳು ನಮಗೆ ಬೇಕು

ಹಸಿರು ನೆಡುತ ಬೆಳೆಸುವ ಕಾನನ
ಹಸಿರ ಸಿರಿಯಲಿ ಹಸನು ಜೀವನ
ಬದಲಾಗದಿರಲಿ ಮಗುವ ಮನ
ಬೆಳೆಸಲಿ ಹಸಿರು ಸಸಿಯ ವನ

ಗಿಡ ನೆಟ್ಟು ಮಾದರಿ ಆಗಿದೆ ಮಗುವು
ದೊರೆಯಲಿ ಎಲ್ಲರ ಸಹಕಾರವು
ನೆಟ್ಟ ಗಿಡಗಳು ಆಗಲಿ ಸಾವಿರವು
ಮಾನವನ ಬದಕಾಗಲಿ ನಂದನವು

ಅಪ್ಪ


ಅಮ್ಮ ಕೊಡುವಳು ಉಸಿರು
ಅಪ್ಪ ನೀಡುವ ಜೀವಕೆ ಹೆಸರು
ಅಪ್ಪ ಈ ಬದುಕಿನ ಆಳದ ಬೇರು
ಅಪ್ಪ ಮನದಿ ನೀನೆಂದೂ ಹಸಿರು

ಬಾಳಿನ ಸೂತ್ರದಾರನು ನೀನು
ಕನಸು ನನಸಾಗಿಸುವ ಶೂರನು
ಕೇಳಿದ್ದು ಕೊಡುವ ಜಾದೂಗಾರನು
ಶ್ರಮ ಜೀವಿಯು ಜಗದಿ ಅಪ್ಪನು

ಬೆವರು ಹರಿಸುವ ಕಟುಂಬಕ್ಕಾಗಿ
ಗದರುತಲೇ ಪ್ರೀತಿಸುವನು ತ್ಯಾಗಿ
ಕಷ್ಟ ಪಡುವ ಹೆಂಡತಿ ಮಕ್ಕಳಿಗಾಗಿ
ಕೊನೆವದೆಗೂ ದುಡಿವ ಕಾರ್ಮಿಕನಾಗಿ

ನಂಬಿಕೆಗೆ ಮತ್ತೊಂದು ಹೆಸರು ಅಪ್ಪ
ಭದ್ರತೆಗೆ ನಿನ್ನ ತೋಳು ಮಾತ್ರ ಅಪ್ಪ
ಮನದಲ್ಲೇ ಅತ್ತು ಪ್ರೀತಿಸುವ ಅಪ್ಪ
ಪದಗಳಿಲ್ಲ ನಿನ್ನ ಬಣ್ಣಿಸಲು ಅಪ್ಪ

ಅಪ್ಪ ಭವಿಷ್ಯದ ಭದ್ರ ಬುನಾದಿ
ತೋರಿಸುವನು ಬದುಕಿನ ಹಾದಿ
ಮೀರುವನು ಇವ ತ್ಯಾಗದ ಪರಿಧಿ
ಅಪ್ಪ ನಿನ್ನ ಪಾದವೆನಗೆ ದಿವ್ಯ ಸನ್ನಿಧಿ

ಸೌರವ್ಯೂಹ - ಸಹಕಾರ


ರವಿಯ ಸುತ್ತವ ಗ್ರಹಗಳು
ನಭೋಮಂಡಲದಿ ಇಹುದು
ಅದರಲಿ ಇಹುದು ಭುವಿಯು
ನಮ್ಮ ಆಶ್ರಯ ತಾಣವಿದು

ಬಂದೊದಗಿದೆ ಈ ಭುವಿಗೆ
ಸಂದಿಗ್ಧ ಪರಿಸ್ಥಿತಿ ದಿನಗಳು
ಸಾಂಕ್ರಾಮಿಕ ರೋಗದಿ
ಜನರು ನರಳುವ ಕ್ಷಣಗಳು

ಬಂದಿವೆ ಉಳಿದ ಗ್ರಹಗಳು
ಭೂವಿಯ ಒಂದಾಗಿ
ಹೇಳುತಿವೆ ಧೈರ್ಯವಾಗಿರು
ಹೆದರಬೇಡ ಎಂದು ಕೂಗಿ

ಜಗದಿ ಶಾಶ್ವತವಲ್ಲ ಯಾವುದು
ಎಲ್ಲವೂ ಭಗವಂತನ ಆಟ
ಎಲ್ಲರೊಂದಾಗಿ ಎದುರಿಸುವ
ಮುಂದಿದೆ ಸಂಭ್ರಮ ಕೂಟ

ಎಂದು ಆಶಿಸತಲಿವೆ ಉಳಿದ
ಎಂಟು ಸೌರವ್ಯೂಹದ ಗ್ರಹಗಳು
ಸಹಾಯ ಹಸ್ತವ ನೀಡುತಲಿ
ಭೂಮಿಯ ಜೊತೆಗಿವೆ ಅವುಗಳು

ವೇದಾವತಿ ಭಟ್ಟ
ಮುಂಬೈ




ಬಣ್ಣಗಳ ಸಂಗಮ



ಬಣ್ಣ ಎರಚುವ ಹಬ್ಬವಿದು ಹೋಳಿ
ಎಲ್ಲೆಲ್ಲೂ ಬಣ್ಣದ ಚಿತ್ತಾರದ ಓಕುಳಿ
ವರ್ಷಕ್ಕೊಮ್ಮೆ ಬರುವುದು ಮರಳಿ
ಬೆಳೆದಿದೆ ಬಾಂಧವ್ಯದ ಸರಪಳಿ

ಮನದ ಭಾವನೆಗಳ ಸಮಾಗಮ
ಇದು ಹಲವು ಬಣ್ಣಗಳ ಸಂಗಮ
ನೆನಪಿಸುತ ರಾಧೆ-ಶ್ಯಾಮರ ಪ್ರೇಮ
ಹೋಳಿ ಈ ಓಕುಳಿ ಹಬ್ಬದ ನಾಮ

ರಂಗು ರಂಗಿನ ರಂಗ ಪಂಚಮಿ
ಬಣ್ಣದಿ ತುಂಬಿ ಹೋಗಿದೆ ಭೂಮಿ
ಇದುವೇ ನವ ಭಾವಗಳ ನವಮಿ
ದಹಿಸಲಿ ಎಲ್ಲ ಕಷ್ಟಗಳ ಸುನಾಮಿ

ಮಾಡುವರು ಜೊತೆಗೆ ಕಾಮನ ದಹನ
ಋತುವಿನ ರಾಜ ವಸಂತನ ಆಗಮನ
ಬಣ್ಣದ ರಂಗಿನಲಿ ಧರೆಯಿದು ನಂದನ
ಜಾತಿ ಬೇಧವ ಮರೆತು ಎಲ್ಲರ ಮಿಲನ

ವೇದಾವತಿ ಭಟ್ಟ
ಮುಂಬೈ 

ಶನಿವಾರ, ಮೇ 22, 2021

ಜೀವನ ಪಯಣ



ಕರೆಯುತಿಹ ಕನಸುಗಳ
ಮರೆಯುತಿಹ ಮನಸುಗಳ
ಜೊತೆ ಓಡುತಿದೆ ಜೀವನ ಪಯಣ...

ನಾಳೆಗಳ ಭರವಸೆಯಲಿ
ನಿನ್ನೆಗಳ ನೆನಪಿನಲಿ
ನಡೆಯುತಿದೆ ಜೀವನ ಪಯಣ...

ಭಾವಗಳ ತೆರೆ ಮರೆಯಲಿ
ತಳಮಳದ ಅಲೆಯಲಿ
ತೇಲುತಿದೆ ಜೀವನ ಪಯಣ...

ಉಕ್ಕಿ ಬರುವ ಕಣ್ಣೀರ ಹನಿಯಲಿ
ಚಿಮ್ಮುವ ನಗೆ ಬುಗ್ಗೆಯಲಿ
ಸಾಗುತಿದೆ ಜೀವನ ಪಯಣ...

ನೋವುಗಳ ಮರೆಯುತಲಿ
ನಲಿವುಗಳ ಮೆಲುಕಿನಲಿ
ಓಲಾಡುತಿದೆ ಜೀವನ ಪಯಣ...

ಭಯದ ಕರಿ ನೆರಳಿನಲಿ
ಭರವಸೆಯ ಬೆಳಕಿನಲಿ
ಕಳೆಯುತಿದೆ ಜೀವನ ಪಯಣ...

ದುಃಖ ತರುವ ಸಾವಿನಲಿ
ಸಂಭ್ರಮದ ಹುಟ್ಟಿನಲಿ
ನಡೆಯುತಿದೆ ಜೀವನ ಪಯಣ...

ಗುರುವಾರ, ಮೇ 20, 2021

ತಿರುಗೇಟು

ತಿರುಗೇಟು

ಉರಿಯುತಿರುವ ಮೇಣದ ಬತ್ತಿ
ಉರಿಯಬಾರದು ಎಂದಿಗೂ ಹೊತ್ತಿ
ಆಗ ಜಗವೇ ಉರಿಯುವುದು ಕತ್ತಿ
ಎಲ್ಲಕೂ ಇದೆ ಅದರದೇ ಆದ ಮಿತಿ

ಮಿತಿ ಮೀರಿದ ಮನುಜನ ಸ್ವಾರ್ಥ
ಬದುಕಿಗೆ ಇಲ್ಲವಾಗಿದೆ ಇಂದು ಅರ್ಥ
ಹಣ, ಪ್ರತಿಷ್ಠೆ ಎಲ್ಲವೂ ಬರಿ ವ್ಯರ್ಥ
ಆಗಿದೆ ಇಲ್ಲಿ ಎಲ್ಲವೂ ಅನರ್ಥ

ತನ್ನ ಬುಡಕೆ ಬೆಂಕಿ ಹಚ್ಚಿಕೊಂಡಿದೆ ಬತ್ತಿಯು
ತನ್ನ ಸ್ವಾರ್ಥಕೆ ತಾನೆ ಆಗಿದೆ ಬಲಿಯು
ಮನುಜನ ಸ್ವಾರ್ಥಕೆ ಇಲ್ಲ ಕೊನೆಯು
ನಡೆಯುತಿದೆ ಇಲ್ಲಿ ವೈರಾಣುವಿನ ಧಾಳಿಯು

ಮನುಕುಲವೇ ತಪ್ಪಿಗೆ ದಂಡ ತೆರುತಿದೆ
ಬದುಕು ಇಲ್ಲಿ ಬಹು ದುಸ್ತರವಾಗಿದೆ
ಮಾರಣ ಹೋಮ ನಡೆಯುತಲೇ ಇದೆ
ಪ್ರಕೃತಿ ಮನುಜನಿಗೆ ತಿರುಗೇಟು ನೀಡಿದೆ


ಬಸವಣ್ಣ

ಹನ್ನೆರಡನೇ ಶತಮಾನದ ಮಹಾಮಾನವ ಬಸವೇಶ್ವರ
ಜನ್ಮ ಸ್ಥಳವು ಬಸವನ ಬಾಗೇವಾಡಿಯ ಇಂಗಳೇಶ್ವರ
ಮಾದರಸ, ಮಾದಲಾಂಬಿಕೆಯರ ಮಗನಾಗಿ ಜನನ
ಸಮಾಜದ ಜನರಲಿ ಅರಿವು ಮೂಡಿಸಿತು ಇವರ ವಚನ

ಸ್ಥಾಪಿಸಿದರು ಇವರು ಅನುಭವ ಮಂಟಪವನು
ಎಲ್ಲರಿಗೂ ತಿಳಿಸಿದರು ಶಿವ ಭಕ್ತಿಯ ಸಾರವನು
ಪರಿಚಯಿಸಿದರು ಸ್ತ್ರೀ-ಪುರುಷ ಸಮಾನತೆಯನು
ವಚನದಿ ಹೇಳಿದರು ಮನಶುದ್ಧಿಯ ಮಹತ್ವವನು

ಸಮಾನತೆಯನು ಜಗಕೆ ಸಾರಿದ ಮಹಾ ಹರಿಕಾರ
ಜಗದ ಜ್ಯೋತಿ ಎಂದು ಹೆಸರಾದ ಕ್ರಾಂತಿವೀರ
ಕಾಯಕವೇ ಕೈಲಾಸ ಎಂದು ಹೇಳಿದ ವಚನಕಾರ
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಹೋರಾಟಗಾರ 

ಜೀವಾನಿಲ

ಜೀವಾನಿಲ

ಮನುಜನು ದಾಟಿದ ಸ್ವಾರ್ಥದ ಪರಿಮಿತಿ
ಐಷಾರಾಮಿ ಜೀವನಕಿಲ್ಲವಾಯ್ತು ಇತಿಮಿತಿ
ವಿನಾಶದ ಅಂಚಿನಲ್ಲಿ ಜೀವಿಗಳ ಸಂತತಿ
ಪರಿಸರ ನಾಶವು ಮೀರಿತು ತನ್ನಯ ಮಿತಿ

ಕುಡಿದುರುಳಿಸಿದ ದಟ್ಟವಾದ ಕಾನನ
ಕೆಡಿಸಿದ ಪ್ರಕೃತಿಯ ಸಮತೋಲನ
ಬಗೆದು ಕೆಡಿಸಿದ ಭುವಿಯೆಂಬ ನಂದನ
ಮೌಲ್ಯ ಬದಿಗಿಟ್ಟು ನಡೆಸಿದ ಜೀವನ

ದೇವರು ನೋಡಿ ಬೇಸತ್ತ ಮನುಜನಾಟ
ಶುರುವಾಯ್ತು ಸೂಕ್ಷ್ಮಾಣು ಜೀವಿಯ ಆಟ
ಜೀವಾನಿಲ ಸಿಗದೆ ಜಗಕಾಯ್ತು ಪರದಾಟ
ಜೀವಕಾಗಿ ಮಾಡಿದ ಮನುಜ ಹೋರಾಟ

ಮುಂದಾದರೂ ಅರಿತು ನಡೆದರೆ ಜೀವನ
ಸ್ವಾರ್ಥವನು ಬದಿಗಿಟ್ಟು ನಡೆದರೆ ಪಾವನ
ಕೊನೆಯಾಗಲಿ ಅತಿಯಾದ ನಗರೀಕರಣ
ಇನ್ನಾದರೂ ಬದುಕಾಗಲಿ ಸುಂದರ ನಂದನ 

ಬುಧವಾರ, ಮಾರ್ಚ್ 24, 2021

ಗ್ರಾಮೀಣ ಮಹಿಳೆ ಮತ್ತು ಮಹಿಳಾ ದಿನಾಚರಣೆ

ಹಿಳಾ ದಿನಾಚರಣೆ

ತಿಳಿದಿದ್ದ ಅವಳಿಗೆ ತನ್ನದೇ
ದಿನಾಚರಣೆ ಎಂದು
ಕೆಲಸ ಮಾಡುತಿಹಳು
ಎಂದಿನಂತೆ ನಾಲ್ಕಕ್ಕೆ ಎದ್ದು

ಮನೆಯ ಕಸ ತೆಗೆದು
ರಂಗವಲ್ಲಿಯ ಹಾಕಿ
ಅಯ್ಯೋ ! ಕೊಟ್ಟಿಗೆಯ
ಕೆಲಸವಿದೆ ಬಾಕಿ

ಗಂಡನ ಜೊತೆಗೆ
ಹೊಲಕೆ ಹೋಗಬೇಕು
ತಿಂಡಿಯ ಜೊತೆಗೆ ಅಡಿಗೆ
ಕೆಲಸವನೂ ಮುಗಿಸಬೇಕು

ಮಹಿಳಾ ದಿನಾಚರಣೆ ಶುಭಾಶಯ
ಸಂಜೆ ಮಗ ತಿಳಿಸುವನು
ಅವಳೆಂದಳು, ಹೀಗೂ ಉಂಟೆ !
ನನಗೆ ತಿಳಿಯದು ಇದು ಏನು?

ವೇದಾವತಿ ಭಟ್ಟ
ಮುಂಬೈ 

ಸ್ನೇಹ

ಸ್ನೇಹ

ರಕ್ತ ಸಂಬಂಧವನು ಮೀರಿದ ಅನುಬಂಧ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಬಂಧ
ಸ್ನೇಹವೆಂಬ ಹೆಸರು ಇದಕೆ ಎಂತ ಚೆಂದ
ಎಲ್ಲ ಕಟ್ಟು-ಕಟ್ಟಳೆಗಳ ಮೀರಿದ ಸಂಬಂಧ

ನೋವು-ನಲಿವುಗಳಲಿ ಜೊತೆಯಾಗುವ ಸ್ನೇಹ
ಇಲ್ಲ ಈ ಬಂಧದಲಿ ಬೇರೆ ಯಾವ ಮೋಹ
ಮನಸು ಒಂದೇ ಆದರೆ ಇಹುದು ಎರಡು ದೇಹ
ಈ ಬಂಧದಲಿ ಎಂದಿಗೂ ಬೇಡ ಸಂದೇಹ

ಸ್ನೇಹಕಾಗಿ ನೀಡುವರು ತಮ್ಮಯ ಜೀವ
ಸ್ನೇಹವೆಂದರೆ ಹೀಗೆ ಬಹು ನವಿರು ಭಾವ
ಮರೆಸುವುದು ಮನಸಿನ ಎಲ್ಲ ನೋವ
ಹೊಮ್ಮಿಸುವುದು ಮನದೊಳಗಿನ ನಗುವ

ಮಂಗಳವಾರ, ಮಾರ್ಚ್ 16, 2021

ಹೆಣ್ಣೆಂದರೆ...

ಹೆಣ್ಣೆಂದರೆ...
ಅಲ್ಲವು ಭೋಗದ ವಸ್ತು
ಹೇಳಿಸಬೇಡಿ ಎಲ್ಲಕು ಅಸ್ತು
ವಂಚನೆಗೆ ಬೀಳಲಾರಳು ಬೆಸ್ತು

ಹೆಣ್ಣೆಂದರೆ...
ನೋವು ಅಡಗಿಸಿ ನಗುವವಳು
ಸಂಸಾರದ ಕಣ್ಣು ಅವಳು
ತನ್ನನ್ನೇ ತೇಯ್ದು ಕೊಳ್ಳುವವಳು

ಹೆಣ್ಣೆಂದರೆ...
ತ್ಯಾಗಮಯಿ, ಸಹನಾ ಮೂರ್ತಿ
ಭುವಿಯಂತೆ ಕ್ಷಮಯಾಧರಿತ್ರಿ
ಜೀವ ಪಣಕಿಟ್ಟು ಜೀವ ಕೊಡುವ ಶಕ್ತಿ

ಹೆಣ್ಣೆಂದರೆ...
ಗಂಗೆಯಂತೆ ಇವಳು ಪಾವನಳು
ಬೀಸುವ ಗಾಳಿಯಂತೆ ಶುದ್ಧಳು
ಬೆಂಕಿಯಂತೆ ದಹನಶೀಲಳು

ಹೆಣ್ಣೆಂದರೆ...
ಮನೆ ಬೆಳಗುವ ನಂದಾದೀಪ
ತಾಯಿಯಾಗಿ ದೇವರರೂಪ
ಸಹಿಸುವಳು ಕೋಪ-ತಾಪ

ಹಸಿರಿನ ದೀಪ

ಹಚ್ಚುವ ನಾವು ಹಸಿರು ದೀಪ
ಕಡಿಮೆ ಮಾಡುವ ಪ್ರಕೃತಿ ತಾಪ
ಪ್ರಕೃತಿಯುಲಿ ದೇವರ ರೂಪ
ಬೇಡ ನಮಗೆ ಪ್ರಕೃತಿಯ ಕೋಪ

ಹಸಿರೇ ನಮ್ಮಯ ಉಸಿರು
ಕೆಡಿಸಿದಿರಿ ಭುವಿಯ ಬಸಿರು
ಕೈಕೆಸರಾದರೆ ಬಾಯಿಗೆ ಮೊಸರು
ಬೇಡ ನಮಗೆ ಬರಿಯ ಹೆಸರು

ಕಾಡಿನಿಂದಲೇ ನಾಡಿಗೆ ಉಳಿವು
ನೀಗುವುದು ಜೀವಿಯ ಹಸಿವು
ಹಸಿರಿನಿಂದಲೇ ನಮಗೆ ಬಲವು
ಮಾತೆ ನೀಗಿಸುವಳು ಎಲ್ಲ ನೋವು

ಕೊನೆಯಾಗಲಿ ಪ್ರಕೃತಿ ನಾಶ
ದೊರೆಯುವುದಾಗ ಸಂತೋಷ
ನಿಲ್ಲಲಿ ಜೀವಸಂಕುಲದ ವಿನಾಶ
ಸುರಿಯಲಿ ಧೋ ಎಂದು ವರ್ಷ

ಮಾಡುವ ಪ್ರಕೃತಿ ಸಂರಕ್ಷಣೆ
ಇದು ನಮ್ಮೆಲ್ಲರ ನೈಜ ಹೊಣೆ
ಬರದು ಆಗ ಮುಂದೆ ಬವಣೆ
ಇರಲಿ ಎಂದು ಪ್ರಕೃತಿಯ ಕರುಣೆ

ಶನಿವಾರ, ಮಾರ್ಚ್ 13, 2021

ಮಹಿಳಾ ದಿನಾಚರಣೆ



ಮಹಿಳೆಯರ ದಿನಾಚರಣೆ
ಆಗದಿರಲಿ ಕೇವಲ ಆಚರಣೆ
ಇರಲಿ ಸಮ್ಮಾನದ ಹೊಣೆ
ಆಗಲಿ ಮಹಿಳೆಯರ ರಕ್ಷಣೆ

ಮನೆಯಲಿ ಮನೆಮಂದಿ ಕಿರುಕುಳ
ಹೊರಗೆ ಲೈಂಗಿಕ ಶೋಷಣೆಯ ಆಳ
ಎಲ್ಲರ ತಪ್ಪಿಗೂ ಹೆಣ್ಣಿಗೆ ಬೈಗುಳ
ಎಂದಿಗೆ ಕೊನೆ ಮಹಿಳೆಯ ಕಳವಳ

ಭಾಷಣದಿ ಮೀಸಲಾತಿ, ಸಮಾನತೆ
ಮುಗಿಯದು ಹೆಣ್ಣಿನ ಗೋಳಿನ ಕಥೆ
ನಿತ್ಯ ನೂತನವು ಶೋಷಣೆಯ ವ್ಯಥೆ
ಅತ್ಯಾಚಾರವೆಂಬುದು ಭೀಕರತೆ

ನೆನಪಿರಲಿ ಮಹಿಳೆ ಪುರುಷನ ಸಮಾನ
ಮಹಿಳೆಯರಿಗೂ ದೊರೆಯಲಿ ಸಮ್ಮಾನ
ಹಕ್ಕು-ಸ್ವಾತಂತ್ರ್ಯ ಸಿಗಲಿ ಅನುದಿನ
ಏಕೆ ಸಂಭ್ರಮ ಕೇವಲ ಒಂದು ದಿನ?

ವೇದಾವತಿ ಭಟ್ಟ
ಮುಂಬೈ 

ಜೀವನ ಪಯಣ

ಜೀವನ ಪಯಣ

ಎಂತಲಿಂದ ಎತ್ತ ಸಾಗಿತು ಬಾಳ ಪಯಣ
ಬರೀ ಕಷ್ಟಗಳ ಸಂಕೋಲೆಯಲಿ ಬಂಧನ
ಮರೀಚಿಕೆಯು ಸುಖ-ಸಂತಸಗಳ ಕ್ಷಣ
ನೋವುಗಳನೇ ಹಾಸಿ ಹೊದ್ದಿಹ ಜೀವನ

ಒಬ್ಬಂಟಿಯು ನಾನು ಹುಟ್ಟು-ಸಾವಿನಲಿ
ಬರುವರೆಲ್ಲ ಬಂಧು-ಬಳಗ ನಲಿವಲಿ
ಯಾರಿಗೆ ಯಾರಿಲ್ಲವು ಈ ಭುವಿಯಲಿ
ತಿರುಗಿಯು ನೋಡರೂ ಮುಪ್ಪಿನಲಿ

ಹೊಟ್ಟೆ ಪಾಡಿಗಾಗಿ ನಿರಂತರ ಅಲೆದಾಟ
ಬಾಳಿದು ಅನುದಿನವೂ ಜಂಜಾಟ
ಬಲ್ಲವರು ಯಾರು ಆ ಭಗವಂತನ ಆಟ
ಬೀರದಿರು ವಿಧಿಯೇ ನಿನ್ನ ಕ್ರೂರ ನೋಟ

ಹಣದ ಮುಂದೆ ಹೆತ್ತ ಮಕ್ಕಳು ದೂರ
ಮರ್ಕಟನೇ ನೀನಾಗಿರುವೆ ಜೊತೆಗಾರ
ಮುಗಿವುದೆಂದು ಭುವಿಯ ಋಣಭಾರ
ಸಾಕಾಗಿದೆ ಈ ಜೀವನವೆಂಬ ಸಂಸಾರ

ಶನಿವಾರ, ಮಾರ್ಚ್ 6, 2021

ಜೀವನ ಮತ್ತು ನಂಬಿಕೆ

ಜೀವನ ಮತ್ತು ನಂಬಿಕೆ

ಜೀವನದಲಿ ಇರಬೇಕು ನಂಬಿಕೆ
ಇದಕಿಲ್ಲವು ಯಾವ ಹೋಲಿಕೆ
ಇಣುಕದಿರಲಿ ಈ ಅಪನಂಬಿಕೆ
ದೇವರಲಿ ಕಳಕಳಿಯ ಕೋರಿಕೆ

ಅಪ್ಪನ ನಂಬುವಂತೆ ಮಗುವು
ಜೀವನದಿ ಇರಲಿ ನಂಬಿಕೆ ಬಲವು
ನಂಬಿದರೆ ಸಿಗುವುದು ನೋವು
ಇಲ್ಲವೇ ಸವಿಯಾದ ಬಾಂಧವ್ಯವು

ಇಹುದು ಹಲವು ಮೂಢನಂಬಿಕೆ
ನಂಬಿ ಮೋಸ ಹೋಗದಿರಿ ಜೋಕೆ
ಹರಡಲಿ ಬಾಂಧವ್ಯದ ಮಾಲಿಕೆ
ಸುಗಮವಾಗಿ ಸಾಗಲಿ ಜೀವನ ನೌಕೆ

ಬದುಕು ನಿರಂತರವಾದ ಪಯಣ
ನಂಬಿಕೆಯ ನೆಲೆಯಲಿ ಬದುಕೋಣ
ತುಂಬಿರಲಿ ನಂಬಿಕೆಯು ಕಣಕಣ
ಬದುಕಾಗಲಿ ಸವಿಯಾದ ಹೂರಣ

ನಂಬಿಕೆಯೇ ಜೀವನದ ತಳಹದಿ
ಸುಖದ ಜೀವನಕಿದುವೇ ಹಾದಿ
ನಂಬಿಕೆಯು ತರುವುದು ನೆಮ್ಮದಿ
ಹೊಸ ಬದುಕಿಗಿದು ಆಗಿದೆ ಆದಿ

ಛತ್ರಪತಿ ಶಿವಾಜಿ



ಶಿವನೇರಿಯಲಿ ಜನಿಸಿದ ಮಹಾವೀರ ಶಿವಾಜಿ
ಇವನನು ಹೆತ್ತವರು ಜೀಜಾಬಾಯಿ-ಶಹಾಜಿ
ವೈರಿಗಳೊಡನೆ ಮಾಡಿಕೊಳ್ಳಲಾರ ಇವ ರಾಜಿ
ಮರಾಠಾ ಸಾಮ್ರಾಜ್ಯದ ವೀರರತ್ನವು ಶಿವಾಜಿ

ಸುಲ್ತಾನಿ ದೊರೆಗಳಿಗೆ ಸಿಂಹಸ್ವಪ್ನ ಈ ವೀರ
ಚರಿತ್ರೆಯಲಿ ಇವನ ಹೆಸರು ಅಜರಾಮರ
ದಾದಾಜೀ ಕೊಂಡದೇವನ ಶಿಷ್ಯ ಈ ಶೂರ
ಹಿಂದೂಸ್ಥಾನ ಒಗ್ಗೂಡಿಸಲು ಸಾರಿದ ಸಮರ

ಸಾಯಿಬಾಯಿಯೊಂದಿಗೆ ಕೂಡಿಬಂತು ಕಂಕಣ
ರಾಯಘಡದಲ್ಲಿ ಇವನಿಗೆ ಕಿರೀಟ ಧಾರಣ
ಕೈಬೀಸಿ ಕರೆಯಿತು ವೀರ ಸಾಮ್ರಾಟನಿಗೆ ರಣ
ತೊಟ್ಟ ಇವನು ಜಯವ ಗಳಿಸುವ ಪಣ









ಅರುಣೋದಯ


ಬಾನಲಿ ಮೂಡಿಹ ಸುಂದರ ನೇಸರ
ಕಳೆಯುವ ಮನದಿ ತುಂಬಿಹ ಬೇಸರ
ತನು-ಮನದಿ ಚೈತನ್ಯದ ಸಂಚಾರ
ಪ್ರಕೃತಿಗೆ ಭಾನುವಿನ ಕಿರಣದ ಹಾರ

ಕರಗುತಿದೆ ಇಬ್ಬನಿಯ ಮುತ್ತಿನ ತೋರಣ
ಬೆಳಗಿದು ಸುಂದರ, ಸವಿಯ ಹೂರಣ
ಭುವಿಯ ತುಂಬಾ ಚೆಲ್ಲಿದೆ ಹೊಂಗಿರಣ
ಕೆಂಪು ಚೆಲ್ಲಿ ಬಣ್ಣವಾಗಿದೆ ಮೂಡಣ

ಹರಡಿದೆ ಅರಳುವ ಹೂವಿನ ಕಂಪು
ಮನಸಿಗೆ ನೀಡಿದೆ ಆಹ್ಲಾದದ ತಂಪು
ಜೊತೆಯಲಿ ಚಿಲಿಪಿಲಿ ಉಲಿಯ ಇಂಪು
ಆವರಿಸಿದೆ ಬೆಚ್ಚನೆ ಬಿಸಿಲಿಗೆ ಹುರುಪು

ನೇಸರನುದಯದಿ ನಾಚಿ ನೀರಾದ ಭುವಿ
ಸಕಲ ಜೀವರಾಶಿಗೂ ಈ ಬೆಳಗು ಸವಿ
ಝೇಂಕರಿಸುತಿದೆ ಸುಪ್ರಭಾತದ ಪಲ್ಲವಿ
ಅರುಣೋದಯವ ನೋಡಿ ಆದೆ ಕವಿ

ಸವಿಜೇನು

ಸವಿಜೇನು

ಮರೆಯದಿರು ಮನವೇ ಸವಿನೆನಪುಗಳನು
ತೊರೆಯದಿರು ಮನವೇ ಬಾಂಧವ್ಯಗಳನು
ಸಹಬಾಳ್ವೆಯಲಿ ನೋಡು ಬಾಳ ಚೆಲುವನು
ಕೂಡಿ ಬಾಳಿದರೆ ಜೀವನವು ಸವಿಜೇನು

ಜೀವನವು ನಿರತ ಭಾವದಲೆಗಳ ಹೊನಲು
ಬಡಿಯಲು ಬಹುದು ಭೀಕರ ಬರಸಿಡಿಲು
ಹರಿಯಲೂ ಬಹುದು ಸಂತಸದ ಕಡಲು
ಬಾಳ ದಾರಿಯ ತುಂಬಾ ಹಲವು ಕವಲು

ಕಹಿಯ ಹಾಲಾಹಲವನು ಬೇಗನೆ ಮರೆತು
ಮೂಡಿಸಲು ಪಣತೊಡುವ ನಮ್ಮ ಗುರುತು
ಕಷ್ಟ-ಸುಖದ ಜೀವನದಿ ಸಮವಾಗಿ ಬೆರೆತು
ಮನದ ತುಡಿತ-ಮಿಡಿತಗಳ ಆದಷ್ಟು ಅರಿತು

ಬುದ್ಧಿಯ ಮಾತು ಕೇಳಿದರೆ ಆಗಬಹುದು ತಪ್ಪು
ಮನದ ಮಾತನು ಕೇಳುತಲಿ ಅದರನೇ ಒಪ್ಪು
ಅಮೂಲ್ಯ ಮುತ್ತ ಕೊಡುವುದು ಸಾಗರದ ಚಿಪ್ಪು
ಒಳ್ಳೆಯ ಮೌಲ್ಯಗಳಿಗೆ ಇಲ್ಲ ಎಂದಿಗೂ ಮುಪ್ಪು

ಮೆಲುಕು ಹಾಕುವ ನಾವು ನೆನಪುಗಳ ಯಾನ
ಇದರಲೇ ಅಡಗಿಹುದು ನಮ್ಮಯ ಜೀವನ
ಹೃದಯವಿದು ಸಿಹಿ-ಕಹಿ ನೆನಪುಗಳ ಸದನ
ಮೀಟುತಿಹುದು ಅದುವು ಇಂಪಾದ ಗಾನ


ಸಿಂಪಿ ಲಿಂಗಣ್ಣ

*ಜನಪದ ರತ್ನ ಸಿಂಪಿ ಲಿಂಗಣ್ಣ*

ವಿಜಯಪುರ ಜಿಲ್ಲೆಯ ಇಂಡಿಯ
ಚಡಚಣ ಗ್ರಾಮದಿ ಜನಿಸಿದರು
ಶಿವಯೋಗಿ-ಸಾವಿತ್ರಿ ದಂಪತಿಯ
ಪ್ರೇಮದ ಪುತ್ರ ಲಿಂಗಣ್ಣನವರು

ಮುಲ್ಕಿ ಮುಗಿಸಿ ಅಧ್ಯಾಪಕ ವೃತ್ತಿ
ಶೃದ್ಧೆಯಿಂದಲಿ ಪ್ರಾರಂಭಿಸಿದರು
ಗರತಿಯ ಹಾಡು, ಜೀವನ ಸಂಗೀತ
ಕವನ ಸಂಕಲನ ಪ್ರಕಟಿಸಿದರು

ಬೆಟ್ಟದ ಹೊಳೆ ಇವರ ಕಾದಂಬರಿ
ಹಲವಾರು ನಾಟಕ ರಚಿಸಿದರು
ನಾಗಾಲೋಟ, ಬಾಳ ಸಂಜೆಯ ಹಿನ್ನೋಟ
ಕೃತಿಯಲಿ ಆತ್ಮ ಚರಿತ್ರೆ ಬರೆದರು

ಜಾನಪದ ಸಾಹಿತ್ಯದ ಉಳಿವಿಗೆ
ಅವಿರತ ಶ್ರಮವಹಿಸಿದರು ಇವರು
ಜಾನಪದ ಜೀವಾಳ ಎಂಬ ಜಾನಪದ
ಕೃತಿಯ ವಿಮರ್ಶೆ ಹೊರಡಿಸಿದರು

ಕರ್ನಾಟಕ ಜನಪದ ರತ್ನ ನಮ್ಮ
ಹೆಮ್ಮೆಯ ಕವಿ ಸಿಂಪಿ ಲಿಂಗಣ್ಣನವರು
ಜಾನಪದ ದಿಗ್ಗಜರೆಂದು ಖ್ಯಾತಿಯ
ಪಡೆದ ನವೋದಯದ ಸಾಹಿತಿ ಇವರು

ಇವರನು ಅರಸಿ ಬಂದ ಪ್ರಶಸ್ತಿ,
ಗೌರವ-ಪುರಸ್ಕಾರಗಳು ಹಲವಾರು
ಪ್ರತಿವರ್ಷ ಕೊಡುವ ಸಿಂಪಿ ಲಿಂಗಣ್ಣ
ಪ್ರಶಸ್ತಿಯಿಂದ ಚಿರಸ್ಥಾಯಿ ಇವರು

ಅಮ್ಮ


ನವ ಮಾಸವ ಮಡಿಲೊಳಗೆ
ಕಾವ ದೇವತೆ ತಾಯೇ
ಜೀವವನೇ ಪಣಕೆ ಇಟ್ಟು
ಜೀವ ಕೊಡುವ ಮಾಯೇ

ನಿನ್ನ ಮಹಿಮೆಯ ಬಣ್ಣಿಸಲು
ನನ್ನಲಿ ಪದವಿಲ್ಲ ತಾಯೇ
ನಿನ್ನ ಹಿರಿಮೆಗೆ ಸಾಟಿಯಿಲ್ಲ
ನನ್ನನು ನೀನೇ ಕಾಯೇ

ಎದೆಹಾಲೆಂಬ ಅಮೃತವ
ಕಾದಿರಿಸಿ ನೀಡಿದ ತಾಯೇ
ಬದುಕಿಗೆ ಜ್ಞಾನದ ಬೆಳಕ
ಮುದದಿ ನೀಡಿದ ಮಾಯೇ

ಕಾಯುವೇ ಎಲ್ಲ ಕಷ್ಟದಲಿ
ತಾಯಿ ದೇವರ ಲೀಲೇ
ಭಯವಾದರೆ ನಿನ್ನ ಮಡಿಲು
ದಯವಿರಿಸು ಈಗಲೇ

ಪ್ರೀತಿ

ಪ್ರೀತಿ

ಚುಮು ಚುಮು ಚಳಿಯಲಿ
ಸೂರ್ಯನ ಎಳೆಬಿಸಿಲ ಸ್ಪರ್ಶದಂತೆ
ಹಿತವೆನಿಸುವುದು ಈ ಪ್ರೀತಿ..

ಸುಡುಬಿಸಿಲಿನಲ್ಲಿ ನಡೆವಾಗ 
ಆಸರೆಯಾಗುವ ಹಸಿರು
ಗಿಡದ ನೆರಳಂತೆ ಪ್ರೀತಿ...

ಪ್ರತಿ ಹೆಜ್ಜೆಯ ಗೆಜ್ಜೆಯ 
ದನಿಯಲ್ಲಿ ಬೆರೆತುಹೋದ
ಇಂಪಾದ ಸ್ವರ ಪ್ರೀತಿ..

ನನ್ನ ಪ್ರತಿ ಕಣ್ಣೀರಿನ ಹನಿ, 
ನಸುನಗೆಯಲ್ಲೂ ಇಣುಕುವ
ಬೆಚ್ಚನೆಯ ಭಾವ ಈ ಪ್ರೀತಿ...

ಉಸಿರಾಡುವ ಗಾಳಿಯಲ್ಲಿ 
ಬೆರೆತು ಉಸಿರಾಗಿರುವ
ಜೀವದ ಜೀವ ಪ್ರೀತಿ...

ತನುವಿಗೆ ತಂಪು ನೀಡುವ
ಮನಕೆ ಚೈತನ್ಯ ಕೊಡುವ
ತುಂತುರು ಮಳೆಹನಿ ಪ್ರೀತಿ..

ಪ್ರೀತಿ ಒಂದು ಭಾವ ಹಲವು

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಸ್ಪರ್ಧೆಗಾಗಿ ಪ್ರೇಮಕಾವ್ಯ - ತೃತೀಯ

ಪ್ರೀತಿ ಒಂದು ಭಾವ ಹಲವು

ಕಣ್ಣು ತೆರೆದು ನೋಡು ಜಗವು ಪ್ರೀತಿಯ ಗೂಡು
ಸಹಕಾರ, ಸಹನೆ, ಶಾಂತಿಯಲಿ ಸಹಬಾಳ್ವೆ ಮಾಡು
ಮಾನವೀಯ ಮೌಲ್ಯಗಳಲಿ ಜೀವನವ ಮಾಡು
ಸತ್ಯ, ಒಳ್ಳೆಯ ತನದ ಹಿಂದೆ ಮಾನವ ನೀ ಓಡು

ಪ್ರೀತಿಯಲಿ ಇಹುದು ಹಲವಾರು ಬಗೆಯು
ದೈವವು ನೀಡಿಹ ಸುಂದರವಾದ ಕೊಡುಗೆಯು
ಯಾರಲೂ ಬೇಡವೇ ಬೇಡ ಹಗೆಯ ಹೊಗೆಯು
ಇರಲಿ ಜೀವನ ಪಯಣದಿ ಮುಗುಳುನಗೆಯು

ಹೃದಯ ಹೃದಯ ಬೆಸೆದಾಗ ಮೂಡುವ ಒಲವು
ತಾಯ ಅಪ್ಪುಗೆಯಲಿ ಮಗುವು ಮರೆವುದ ಜಗವು
ಮೂಕ ಪ್ರಾಣಿಗೂ ತಿಳಿವುದೀ ಪ್ರೇಮ ಭಾವವು
ಇಹುದು ಅಣ್ಣ-ತಂಗಿಯೆಂಬ ವಾತ್ಸಲ್ಯದ ಬಂಧವು

ಭುವಿ ಉದಯ ರವಿಯ ನಡುವಿನಾ ಒಲವು
ಜಗದ ಜೀವರಾಶಿಗಿದುವೇ ಆಗಿದೆ ಬಲವು
ಹೊಂದಾಣಿಕೆಯ ಜೀವನದಲೇ ಇದೆ ಚೆಲವು
ವಿಶ್ವ ಮಾನವ ಸಂದೇಶದೆ ಬಾಳಿಗೆ ಗೆಲುವು

ಮಾಮರಕೂ ಕೋಗಿಲೆಗೂ ಬೆಸೆದಿದೆ ಬಂಧ
ಬೆಟ್ಟದ ನೆಲ್ಲಿಗೂ ಸಾಗರದ ಉಪ್ಪಿಗೂ ಸಂಬಂಧ
ಎಲ್ಲೋ ಹುಟ್ಟಿ ಬೆಳೆದ ಹೃದಯಗಳಿಗೆ ಅನುಬಂಧ
ಬೆಸೆದಿರುವ ಭಾವಗಳಲಿ ತುಂಬಿಹುದು ಆನಂದ

ಜೀವನ ಸಂತೆ

 ಜೀವನದ ಸಂತೆ

ಕ್ಷಣ ಕ್ಷಣಕೂ ಅನಿರೀಕ್ಷಿತಗಳು
ಸುಲಭವಲ್ಲ ಜೀವನವೆಂಬ ಸಂತೆ
ಬಾಳ ದಾರಿಯ ತುಂಬಾ
ಇಹುದು ಬರಿ ತಿರುವುಗಳ ಕಂತೆ

ಆಲೋಚಿಸಿ ಜಾಗೃತೆಯಲಿ ಇರಿಸು
ನೀ ಹೆಜ್ಜೆಯನು ಮುಂದಕೆ
ಅಪಾಯದ ಸೂಚನೆಯ ಕಡೆಗಣಿಸಿ
ನಡೆಯದಿರು ನೀ ಮುಂದಕೆ

ಸರಳ ಬದುಕನು ನಡೆಸು ಎಂದಿಗೂ
ಅತಿಯಾಸೆಯನು ಬಿಟ್ಟು ಬಿಡು
ನೀನು ಬದುಕಿ ಇತರಿರಿಗೂ
ಸುಖವಾಗಿ ಬದುಕಲು ಬಿಡು

ನಾಲ್ಕು ದಿನದ ಜೀವನದಲಿ
ಏಕೆ ನಿನಗೆ ಬರಿಯ ಧಾವಂತ
ನೀನು ನೀನಾಗಿಯೇ ಬದುಕು
ಸ್ವಾರ್ಥಗಳನು ಬಿಟ್ಟು ಜೀವಂತ

ಹೊರಗೆ ಹಾಕು ಮನದಲಿ
ತುಂಬಿರುವ ಎಲ್ಲ ರೀತಿಯ ಕಲ್ಮಷ
ನಿನ್ನ ಭಾವನೆಗಳಾಗಲಿ
ಹಾಲಿನಂತೆಯೇ ನಿಷ್ಕಲ್ಮಷ


ಬಿಸಿಲು ಕುದುರೆ


ನೀರ ಮೇಲಣ ಗುಳ್ಳೆಯಂತೆ
ಜೀವನವು ಮನವೇ
ಸ್ವಾರ್ಥ, ವಂದನೆ, ಅಹಂಕಾರ
ದರ್ಪಗಳ ತೊರೆ ಮನವೇ

ಬಿಸಿಲು ಕುದುರೆಯನು
ಏರಬೇಡ ಮನವೇ
ಮರಭೂಮಿ ಮರೀಚಿಕೆ
ಹುಡುಕಬೇಡ ಮನವೇ

ನಾಲ್ಕು ದಿನದ ಜೀವನದಲಿ
ನಗುತ ಬಾಳು ಮನವೇ
ಎಲ್ಲರೊಳಗೆ ಒಂದಾಗಿ
ಬೆರೆತು ಹೋಗು ಮನವೇ

ಸೋದಾಗ ಕುಗ್ಗದಿರು
ಗೆದ್ದಾಗ ಹಿಗ್ಗದಿರು ಮನವೇ
ಕಷ್ಟಗಳಿಗೆ ಜಗ್ಗದೇ ಧೈರ್ಯದಿ
ಮುನ್ನುಗ್ಗು ನೀ ಮನವೇ

ಮಗುವಿನಂತೆ ಪ್ರತಿಕ್ಷಣವೂ
ಕಾರ್ಯತತ್ಪರನಾಗು ಮನವೇ
ನಗುವಿನಲೇ ಜಗವ ಗೆಲ್ಲುತ
ಮುನ್ನಡೆಯುತಿರು ಮನವೇ

ತವರು


ಹೆಣ್ಣಿನ ಪ್ರೀತಿಯ ತವರು
ಹಬ್ಬಿದೆ ಬಾಂಧವ್ಯದ ಬೇರು
ಮನದಿ ನೆನಪು ಹಚ್ಚ ಹಸಿರು
ಇಲ್ಲಿಯೇ ಬಂದಿಹುದು ಉಸಿರು

ಹೆಂಗೆಳೆಯರ ಒಲವಿನ ಗೂಡು
ಇಲ್ಲಿದೆ ಸವಿ ನೆನಪುಗಳ ಜಾಡು
ಕಷ್ಟ ಕಾಲದ ಸಂಜೀವಿನಿ ಇದು
ಹೆಣ್ಣಿಗೆ ತವರು ಗಂಧದ ಕೊರಡು

ಅಣ್ಣ ತಮ್ಮರೊಡನೆ ಆಡಿದ ನೆನಪು
ಅಪ್ಪ-ಅಮ್ಮನ ವಾತ್ಸಲ್ಯದ ತಂಪು
ಅಂಗಳದ ಜಾಜಿ ಮಲ್ಲಿಗೆಯ ಕಂಪು
ತವರಿನಾ ಕೋಗಿಲೆ ಗಾನ ಬಲು ಇಂಪು

ಕಳೆದ ಬಾಲ್ಯದ ಸವಿಯ ನೆನಪುಗಳು
ಗೆಳತಿಯೊಡನೆ ಕಂಡ ಕನಸುಗಳು
ಮೊದಲ ಮೂಡಿದ ಪ್ರೀತಿ ಭಾವಗಳು
ಮುಚ್ಚಿಟ್ಟ ಹತ್ತು ಹಲವು ಗುಟ್ಟುಗಳು

ಮತ್ತೆ ಹೋಗುವ ಕಾತರವು ತವರಿಗೆ
ಸೇರವ ಕಾತರವು ಕಂಪಿನಾ ಮಣ್ಣಿಗೆ
ಮೈಯೊಡ್ಡಬೇಕು ಸೋನೆ ಮಳೆಗೆ
ಮರಳ ಬೇಕು ಒಮ್ಮೆ ಸ್ವರ್ಗದ ಸಿರಿಗೆ


ಬಾಳ ಮುನ್ನುಡಿ

ಬಾಳ ಮುನ್ನುಡಿ

ತಂದೆ ಪ್ರೀತಿಯ ವರ್ಷಧಾರೆಯ
ನಿನ್ನನು ನೋಡಿ ನಾನು ತನ್ಮಯ
ನೀ ನನ್ನಯ ಮುದ್ದಿನ ತನಯ
ನೀನೊಂದು ಮುಗಿಯದ ವಿಸ್ಮಯ

ನೀನೇ ನನ್ನಯ ಸುಂದರ ಲೋಕ
ನಿನ್ನಯ ನಾಮಧೇಯವು ಶಿವಾಂಕ
ಅಮ್ಮಾ.. ಎಂಬ ನಿನ್ನ ಧ್ವನಿ ಪುಳಕ
ನೀ ನನ್ನ ಗೆಳೆಯ, ಮಾರ್ಗದರ್ಶಕ

ನೀ ತುಂಬಿದೆ ನನ್ನಯ ಮಡಿಲು
ನಮ್ಮ ನಡುವೆ ಇದೆ ಪ್ರೀತಿ ಕಡಲು
ಎಲ್ಲ ಕಷ್ಟವ ಮರೆವೆ ನೀ ನಗಲು
ಜಗದಿ ನೀ ಎಲ್ಲಕ್ಕಿಂತ ಮಿಗಿಲು

ನೀ ನನ್ನ ಬಾಳಿನ ಮುನ್ನುಡಿ
ಮಧುರವು ನಿನ್ನ ಪ್ರತಿ ನುಡಿ
ಎಲ್ಲ ನೋವಿಗಾದೆ ನೀ ಬೆನ್ನುಡಿ
ಸಾಂತ್ವನ ನೀಡುವುದು ನಿನ್ನ ನುಡಿ



ವಿಧಿ ಬರಹ

ವಿಧಿ ಬರಹ

ದೈವವಿತ್ತ ಬದುಕು ಇದುವು
ತಿಳಿಯದು ವಿಧಿಯ ಆಟವು
ಹಂಚಿ ತಿನ್ನುವುದರಲೇ ಸುಖವು
ಇಲ್ಲ ಇವರಿಗೆ ಬೇರೆ ವೈಭವವು

ತುತ್ತಿಗಾಗಿ ಮಾಡುವ ಅಲೆದಾಟ
ನೆಲೆಗಾಗಿ ನಿತ್ಯವೂ ಹುಡುಕಾಟ
ಜೊತೆಗೆ ಉಳ್ಳವರು ಕೊಡುವ ಕಾಟ
ದೇವರೇ.. ಏನಿದು ನಿನ್ನಯ ಆಟ?

ಚಿಂದಿ ಆಯುವುದೇ ಬಾಲ್ಯವು
ಅದರಲಿ ದೊರೆತುದೇ ಅಮೂಲ್ಯವು
ಎಣ್ಣೆ ನೀರು ಕಾಣದ ಜೀವವು
ಸಿಕ್ಕಿದುದರಲೇ ಸಂತೃಪ್ತಿಯ ನಗುವು

ಜೊತೆಯಾಗಿಹರು ಇವರಿಬ್ಬರು
ನೋವು-ನಲಿವಲಿ ಒಬ್ಬರಿಗೊಬ್ಬರು
ಎಲ್ಲಿಹರೋ ಇವರನು ಹೆತ್ತವರು??
ಮುಗ್ಧತೆಯ ಲೋಕದಲಿ ಬರಿ ಇವರು...



ಸೈನಿಕ

ಸೈನಿಕ

ಮಳೆ ಬಿಸಿಲ ಲೆಕ್ಕಿಸದೆ ಗಡಿಯನು
ಕಾಯುವ ವೀರನು ಸೈನಿಕನು
ನಮಗೆ ನೆಮ್ಮದಿ ನೀಡುವನು
ದೇಶದ ಹೆಮ್ಮೆಯ ಪುತ್ರನಿವನು

ಜಯಶಾಲಿ ಆದ ಯುದ್ಧದಲಿ
ಆದರೆ ಕೈ ಇಲ್ಲವಾಯ್ತು ದಾಳಿಯಲಿ
ಹೊರಟ ಊರಿಗೆ ವಿರಾಮದಲಿ
ಪ್ರೀತಿಯ ಮಗಳ ನೆನೆಯುತಲಿ

ನಿಂತನು ತುಂಡಾದ ಕೈ ಹಿಂದಿರಿಸಿ
ಮಗಳು ಚಾಕಲೇಟ್ ಬಯಸಿ
ಅಪ್ಪನ ಅಪ್ಪಿ ಕೈಯ ಎಳೆದಾಗ
ಅವಳ ಕಣ್ಣಲಿ ನೀರು ಹರಿಯಿತಾಗ

ರೋಚಕ ಕಥೆಯ ಅವಳಿಗೆ
ಧೈರ್ಯವ ನೀಡುತ ಮಗಳಿಗೆ
ಹೆಮ್ಮೆಯ ಸೈನಿಕ ನಗಿಸಿದನು
ತಂದಿಹ ಉಡುಗೊರೆ ನೀಡಿದನು

ಚೈತ್ರದ ಚಿಗುರು

ಚೈತ್ರದ ಸೊಬಗು

ಋತುಗಳಗ ರಾಜ ವಸಂತನ ಆಗಮನ
ಚೈತ್ರದ ಚಿಗುರು ಸೆಳೆಯುತಿದೆ ನಯನ
ಬೇವು-ಬೆಲ್ಲದ ಸಿಹಿ-ಕಹಿಯ ಮಿಶ್ರಣ
ಜೀವನದಿ ಸುಖ-ದುಃಖದ ಸಮ್ಮಿಶ್ರಣ

ಹಸಿರು ಸೀರೆಯಲಿ ಭುವಿಯ ನರ್ತನ
ಇದ ನೋಡಲು ರವಿಯ ಆಗಮನ
ನಾಚಿ ನೀರಾದ ಭುವಿಯ ಮೈ-ಮನ
ಮೇಳೈಸಿದೆ ಇದೆ ಚೆಲುವಿನ ಕಥನ

ಜೊತೆಗೆ ಕೋಗಿಲೆಯ ಮಧುರ ಗಾನ
ತರುಲತೆ, ಪುಷ್ಪಗಳ ಸೊಬಗ ಯಾನ
ಪ್ರಕೃತಿ ಸೊಬಗಿನ ರಮ್ಯತೆಯ ತಾಣ
ಎನಿದು ಸುಂದರವು ಇಲ್ಲಿ ಜೀವನ...

ಭಾವ ಸಂಚಲನ

ಭಾವ ಸಂಚಲನ

ಇಳಿ ಸಂಜೆಯ ಸೋನೆ ಮಳೆಯಲಿ
ಮಳೆಯಲಿ ಭಾವಸಮ್ಮಿಲನ ಹೃದಯದಲಿ
ಹೃದಯದಲಿ ಪ್ರೀತಿಯ ಸರಿಗಮ ಗುನುಗುತಲಿ
ಗುನುಗುತಲಿ ಬೆಸೆಯುತಿದೆ ಭಾವ ಮೌನದಲಿ

ಮೌನದಲೂ ಜೀವನಕೆ ಹೊಸ ಅರ್ಥ ನಿನ್ನಾಗಮನ
ನಿನ್ನಾಗಮನದಿ ಬಾಳಲಿ ನಿನ್ನೊಲವ ಬಂಧನ
ಬಂಧನದ ಜೊತೆ ಸ್ಪರ್ಶದಿ ಹೊಸ ರೋಮಾಂಚನ 
ರೋಮಾಂಚನ ಬಾಳ ಯಾನದಿ ನೂತನ ಸಂಚಲನ

ಸಂಚಲನದ ಏಕಾಂತ ನಾಚಿ ಮರೆಯಾದ ಚಂದಿರ
ಚಂದಿರನ ಬೆಳಕಲಿ ಭಾವಗಳ ಹಸಿರು ಹಂದರ
ಹಂದರದಲೆ ಉಕ್ಕುತಿದೆ ಭಾವದಲೆಯ ಸರೋವರ
ಸರೋವರ ಪದಗಳಗೆ ನಿಲುಕದಷ್ಟು ಸುಂದರ

ಸುಂದರವಾಗಿ ಮೌನವಾದ ಕೋಗಿಲೆ ಮತ್ತೆ ಹಾಡಿತು
ಹಾಡುತಲಿ ಪ್ರೀತಿಯ ಗೂಡನು ಮುದದಿ ಸೇರಿತು
ಸೇರುತಲಿ ಬಾಳಲಿ ಕವಿದ ಕತ್ತಲು ಕಳೆಯಿತು
ಕಳೆಯಿತು ಒಲುಮೆಯಲಿ ಜೀವನ ಹಸನಾಯಿತು






ಮಂಗಳವಾರ, ಜನವರಿ 26, 2021

ಸಂವಿಧಾನ

ಜನರಿಂದ ಜನರಿಗಾಗಿ ನಮ್ಮ ಸಂವಿಧಾನ
ಒಳ್ಳೆಯ ನ್ಯಾಯ ನೀತಿಗಿದುವೇ ಅಭಿದಾನ
ಜನವರಿ ಇಪ್ಪತ್ತಾರರಂದು ಇದರ ಜನನ
ಅಂಬೇಡ್ಕರರಿಂದ ಇದು ಆಗಿದೆ ಸಂರಚನ

ಮೂಲಭೂತ ಹಕ್ಕು ಸ್ವಾತಂತ್ರ್ಯದ ಸಂಕಲನ
ಜಗತ್ತಿನ ಎಲ್ಲೆಡೆ ದೊರಕಿದೆ ಇದಕೆ ಸಮ್ಮಾನ
ಸಂವಿಧಾನವಾಗಿದೆ ಮೌಲ್ಯಗಳ ಸಂಚಲನ
ಪರಿಹಾರವು ಇದರಿಂದ ಎಲ್ಲ ಅನುಮಾನ

ಸ್ವಾತಂತ್ರ್ಯ ಸಮಾನತೆಯ ಹಕ್ಕುಗಳ ಸಾಲು
ಸಾರಿತು ಇದು ರಾಷ್ಟ್ರವು ಎಲ್ಲಕ್ಕಿಂತ ಮೇಲು
ಮಾಡಿತು ಸರ್ಕಾರದ ಕಾರ್ಯಗಳ ಪಾಲು
ಚಿಮ್ಮಿಸಿದೆ ಮಾನವೀಯ ಮೌಲ್ಯದ ಹೊನಲು

ಒತ್ತು ನೀಡಿತು ವನ್ಯ ಜೀವಿಗಳ ಸಂರಕ್ಷಣೆಗೆ
ಅಡಿಪಾಯವಿದು ವೈಜ್ಞಾನಿಕ ಮನೋಭಾವನೆಗೆ
ರಾಷ್ಟ್ರಗೀತೆ, ಧ್ವಜದ ಗೌರವದ ಮೆರವಣಿಗೆ
ನಮ್ಮ ಸಂವಿಧಾನವ ಗೌರವಿಸುವ ಕೊನೆವರೆಗೆ

ಇದುವು ದೊಡ್ಡದಾದ ಲಿಖಿತ ಸಂವಿಧಾನವು
ಜಾತ್ಯಾತೀತ ಆಗಿಹುದು ಬಹಳ ಪ್ರಧಾನವು
ಸಂವಿಧಾನ ಗೌರವಿಸುವುದು ನಮ್ಮ ಕರ್ತವ್ಯವು
ದೇಶದ ಆತ್ಮ ಮತ್ತು ಹೃದಯ ಈ ಸಂವಿಧಾನವು

ಭಾನುವಾರ, ಜನವರಿ 24, 2021

ಕವಿತೆ ಕೃಷ್ಣ


ಕಲ್ಪವೃಕ್ಷ ಜಿಲ್ಲೆ ತುಮಕೂರು ಇವರ ತವರು
ಕೆಂಚಯ್ಯ-ಸಂಜೀವಮ್ಮನ ಪುತ್ರರು ಇವರು
ಶುಕ್ಲ ಪಕ್ಷದ ಚೌತಿಯಂದು ಜನಿಸಿದರು
ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ಇವರು

ನನ್ನೂರು ಕ್ಯಾತಸಂದ್ರದಿ ಬಿತ್ತರ ಊರಭಿಮಾನ
ರಚಿಸಿದರು ಇವರು ಹಲವಾರು ಕವನ ಸಂಕಲನ
ಅರಸಿ ಬಂದವು ಇವರನು ಪ್ರಶಸ್ತಿ ಸನ್ಮಾನ
ಸಾಹಿತ್ಯ ಸೇವೆಗೆ ಹೆಸರು ಕವಿತಾ ಪ್ರಕಾಶನ

ಅನೇಕ ಕೃತಿಗಳಿಗೆ ಮುನ್ನುಡಿಯ ಬರೆದರು
ನಾಟಕ ಲೋಕದಲಿ ಪ್ರಸಿದ್ಧ ಇವರ ಹೆಸರು
ಜೀವನ ಚರಿತ್ರೆಗಳ ರಚನಾಕಾರರು
ಇವರೊಬ್ಬ ಹೆಸರಾಂತ ಉಪನ್ಯಾಸಕಾರು

ಮಕ್ಕಳ ಸಾಹಿತ್ಯ ಲೋಕದಲೂ ಕೈಯಾಡಿಸಿದರು
ಸಂಶೋಧನಾ ಕೃತಿಗಳ ರಚಿಸಿದ ಕರ್ತೃ ಇವರು
ಕನ್ನಡ ರತ್ನ, ಚುಂಚಶ್ರೀ ಪ್ರಶಸ್ತಿ ಪುರಸ್ಕೃತರು
ಜನಮನದಿ ಗುರುಗಳೆಂದು ಪ್ರಸಿದ್ಧರಾದರು

ಕ್ಷಮಯಾಧರಿತ್ರಿ

 ಕ್ಷಮಯಾಧರಿತ್ರಿ*

ಹೆಣ್ಣೆಂದರೆ ಭೂಮಿಯ ತೂಕದವಳು
ಸಹನಾಮಯಿ, ಕ್ಷಮಯಾಧರಿತ್ರಿ ಅವಳು
ನವಮಾಸ ಗರ್ಭದಲಿ ಕಂದನ ಹೊರವಳು
ಜೀವವ ಪಣಕಿಟ್ಟು ಜೀವವ ಸೃಷ್ಟಿಸುವಳು

ಮಗಳಾಗಿ ಆಗುವಳು ಮನೆಯ ನಂದಾದೀಪ
ಸಹೋದರಿಯಾಗಿ ವಾತ್ಸಲ್ಯದ ಪ್ರತಿರೂಪ
ಸಹಿಸಿವಳು ಕಷ್ಟಗಳ ಪಡುವಳು ಪರಿತಾಪ
ತನ್ನೆಲ್ಲ ಆಸೆಗಳನು ತ್ಯಜಿಸುವಳು ಪಾಪ

ಹುಟ್ಟಿದ ಮನೆಯ ಬಿಟ್ಟು ಕೊಟ್ಟ ಮನೆ ಸೇರುವಳು
ತಂದೆ-ತಾಯಿ, ಒಡಹುಟ್ಟುಗಳ ತೊರೆಯುವಳು
ಸೇರಿದ ಮನೆಯಲಿ ಎಲ್ಲರಿಗಾಗಿ ದುಡಿಯುವಳು
ತನ್ನ ಸುಖವನೇ ಕೊನೆಯಲಿ ಮರೆಯುವಳು

ಓ ಹೆಣ್ಣೇ.. ನಿನಗೂ ಇದೆ ಒಂದು ಹೊಸ ಜೀವನ
ಎಲ್ಲ ಕ್ಷೇತ್ರದಲೂ ನಿನಗೂ ಇದೆ ಒಳ್ಳೆಯ ಸಮ್ಮಾನ
ನೀನೂ ಆಗಿರುವೆ ಪುರುಷನಿಗೆ ಸರಿ ಸಮಾನ
ಆಗಲಿ ನಿನ್ನ ಭಾವನೆಗಳ ಅನಾವರಣ

ಹೊಸ ವರ್ಷ

ಹೊಸ ಮನ್ವಂತರ

ಮುಗಿಯಲಿ ಕಹಿಯ ಈ ವರುಷ
ಬರಲಿ ಭರವಸೆಯ ಹೊಸ ವರುಷ
ತೊರೆಯುವ ಎಲ್ಲ ದ್ವೇಷ-ರೋಷ
ತುಂಬಲಿ ಎಲ್ಲರ ಮನದಿ ಸಂತೋಷ

ಸ್ವಾಗತಿಸುವ ಹೊಸ ಮನ್ವಂತರ
ಆಗಿರಲಿ ಇದುವು ಎಂದೂ ಸುಂದರ
ಶಾಂತಿಯ ನೆಮ್ಮದಿಯ ಹಂದರ
ಮೂಡಲಿ ಹೊಸ ಬೆಳಕಿನ ಚಂದಿರ

ಒಂದಾಗಿ ನಡೆವ ಪ್ರಗತಿಯೆಡೆಗೆ
ನೀಡುವ ಸಹಬಾಳ್ವೆಯ ಕೊಡುಗೆ
ಮಾನವೀಯ ಮೌಲ್ಯಗಳ ಜೊತೆಗೆ
ಇರಲಿ ದೈವೀ ಕೃತಿಯು ನಮಗೆ

ಕೊನೆಯಾಗಲಿ ನಮ್ಮೆಲ್ಲ ಸಂಕಷ್ಟ
ಜೀವಾಣುವಿನ ಅಂತ್ಯವಾಗಲಿ ಸ್ಪಷ್ಟ
ಒಲಿದು ಬರಲಿ ಜಗಕೆ ಅದೃಷ್ಟ
ಲಾಭವಾಗಿ ಬರಲಿ ಆದ ಎಲ್ಲ ನಷ್ಟ

ಹೊಸ ಮನ್ವಂತರ

ಬೇಗ ಕಳೆಯಲಿ ಕಹಿಯ ಈ ವರುಷ
ಬರಲಿ ಭರವಸೆಯ ಹೊಸ ವರುಷ
ತರಲಿ ಹೊಸ ಜೀವನದ ಹೊಸ ಹರುಷ
ತೊಳೆಯಲಿ ಎಲ್ಲ ಹಳೆಯ ಕೊಳೆ-ಕಲುಷ

ಕೊನೆಯಾಗಲಿ ಹಬ್ಬಿದ ರೋಗದ ಭೀತಿ
ಜಾರಿಯಾಗಲಿ ಎಲ್ಲರಿಗೂ ಒಂದೇ ನೀತಿ
ಆಗಲಿ ನಿರಂತರವೂ ದೇಶದ ಪ್ರಗತಿ
ಓ ದೇವ ಮನುಜರ ಮೇಲೆ ತೋರು ಪ್ರೀತಿ

ಹಳೆ ಬೇರಲಿ ಹೊಸ ತಳಿರು ಚಿಗುರಲಿ
ಹೊಸ ಮನ್ವಂತರಕೆ ನಾಂದಿಯಾಗಲಿ
ಜೀವನದಲಿ ಎಂದಿಗೂ ಶಾಂತಿ ನೆಲೆಸಲಿ
ಕಷ್ಟ-ದುಃಖ ದ್ವೇಷ-ರೋಷ ಕೊನೆಯಾಗಲಿ

ಹೊಸ ಪಥದಿ ಸಂಚರಿಸುವ ರವಿಯ ಕಿರಣ
ನೀಡಿದೆ ಹೊಸ ಬೆಳಕಿನ ಶುಭದ ಸಂಕ್ರಮಣ
ಭುವಿಯ ತುಂಬಾ ಚೈತನ್ಯದ ಅನಾವರಣ
ನವ ಉಲ್ಲಾಸವು ತುಂಬಲಿ ಪ್ರತಿ ಕಣ ಕಣ

ಜೀವನವಾಗಲಿ ಎಂದೆಂದಿಗೂ ಸಿಹಿ ಹೂರಣ
ಕಟ್ಟುವಂತಾಗಲಿ ಸಂಭ್ರಮದಿ ಹಸಿರು ತೋರಣ
ಇರಲಿ ಕಾಣದ ಕೈಯ ಅಭಯ ಹಸ್ತದ ಪ್ರೇರಣ
ನಾಂದಿಯಾಗಲಿ ಇಂದೇ ಗೆಲುವಿನ ಚಾರಣ

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

ಗಣರಾಜ್ಯೋತ್ಸವದ ಸಂಭ್ರಮವು
ತಾಯಿ ಭಾರತಿಯೇ ನಿನಗೆ
ಸಂವಿಧಾನ ಜಾರಿಯಾದ ದಿನವು
ಇದುವೇ ನಿನಗೆ ಶುಭ ಗಳಿಗೆ

ಸಮವಸ್ತ್ರ ಧರಿಸಿ ರಾಷ್ಟ್ರಗೀತೆ
ಹಾಡಿದ ಶಾಲಾ ದಿನದ ನೆನಪು
ಮನದಿ ಇದೆ ಗಣರಾಜ್ಯೋತ್ಸವ
ಪ್ರಭಾತ ಪೇರಿಯ ಹೊಳಪು

ಇಪ್ಪತ್ತಾರು ಜನವರಿಯಂದು
ಆಚರಿಸುವೆವು ಗಣರಾಜ್ಯೋತ್ಸವ
ಶಿಸ್ತಿನಿಂದ ಮರವಣಿಗೆ ಮಾಡುತ
ಘೋಷಣೆಯನು ಕೂಗುವ

ಅಂಬೇಡ್ಕರರು ರಚಿಸಿದರು ದೇಶಕ್ಕೆ
ನೀತಿ-ನಿಯಮಗಳ ಸಂವಿಧಾನ
ದೇಶದ ಐಕ್ಯತೆ, ಸಮಗ್ರತೆಗಳಿಗೆ
ಇದುವೇ ಆಗಿಹುದು ಅಭಿದಾನ

ರಾಷ್ಟ್ರ ರಾಜಧಾನಿ ದೆಹಲಿಯಲಿ
ನಡೆವುದು ಸಿಪಾಯಿಗಳ ಮೆರವಣಿಗೆ
ಪ್ರಶಸ್ತಿ-ಪುರಸ್ಕಾರಗಳ ನೀಡುವರು
ಅಂದು ಸಾಧನೆಗೈದಂತ ವೀರರಿಗೆ

ವೇದಾವತಿ ಭಟ್ಟ
ಮುಂಬೈ 

ಶುಕ್ರವಾರ, ಜನವರಿ 22, 2021

ಶೋಷಣೆ


ಹೆಣ್ಣೇ ನಿನಗೆ ಮಾತ್ರ ಏಕೇ
ಕಟ್ಟುಕಟ್ಟಳೆ ನಿಯಮ ಪಾಲನೆ?
ಪುರುಷನಿಗೂ ಇರಲಿ ಸ್ವಲ್ಪ
ಇದರ ಬಗ್ಗೆ ಯೋಚನೆ..

ಸಂಪ್ರದಾಯದ ಹೆಸರಿನಲಿ
ನಡೆಯುವುದು ಹೆಣ್ಣಿನ ಶೋಷಣೆ
ಕಂದಾಚಾರಗಳಿಂದ ದೊರೆಯುವುದು
ಪುರುಷರ ದೌರ್ಜನ್ಯಕ್ಕೆ ಪೋಷಣೆ.

ಕರಿಮಣಿ, ಕಾಲುಂಗುರಗಳೇ 
ಹೆಣ್ಣಿಗೆ ಬಿಡಿಸಲಾರದ ಬಂಧನ
ಅವಳ ಬವಣೆಯ ವಿಧವು
ಅನುದಿನವೂ ನೂತನ.

ಹೆಣ್ಣು ಹುಟ್ಟಿದರೂ, ಬೆಳೆ 
ಕಡಿಮೆಯಾದರೂ ಹಣ್ಣು ಕಾರಣ
ಏನೇ ಕೆಡುಕಾದರೂ ಹೇಳುವರು
ಅದಕ್ಕೆ ಕಾರಣ ಅವಳ ಕೆಟ್ಟ ಕಾಲ್ಗುಣ.

ಮಹಿಳೆ ಪುರುಷನ ಸಮಾನ
ಇದು ಕೇವಲ ಪ್ರಚಾರ
ಹೆಣ್ಣಿನಿಂದಲೇ ಹೆಣ್ಣಿನ ಶೋಷಣೆ
ಇದು ಪ್ರಸ್ತುತ ವಿಚಾರ.

ಮಹಿಳೆಯರೆಲ್ಲ ಒಂದಾಗಿ ಸೇರಿ
ಶೋಷಣೆ, ದೌರ್ಜನ್ಯವ ಮೀರಿ
ಹೊಂದಬೇಕು ಪುರುಷ ಪ್ರಧಾನ
ವ್ಯವಸ್ಥೆಯ ಸಮಾಧಿಯ ಗುರಿ



ಮಂಗಳವಾರ, ಜನವರಿ 19, 2021

ಸುಗ್ಗಿ

ಸವಿಯ ಸುಗ್ಗಿಯ ಸಿಹಿ
ಸಂಭ್ರಮದ ಸಮಯದಿ
ಹಿರಿ ಹಿರಿ ಹಿಗ್ಗನು ನೋಡು
ಅನ್ನದಾತನ ಮೊಗದಿ

ತುಂಬಿದ ತೆನೆಗಳನು
ಸರಸರನೆ ಕೊಯ್ಯುತ
ಸುಗ್ಗಿಯ ಹಾಡನು
ಮುದದಲಿ ಹಾಡುತ

ಭೂದೇವಿಯ ಪೂಜೆಯ
ಭಕ್ತಿಯಿಂದಲಿ ಗೈಯುತ
ಸಿಹಿಯಾದ ಹುಗ್ಗಿಯನು
ಎಲ್ಲರೂ ಸವಿಯುತ

ರೈತನ ಬದುಕಿನಲಿ ಈಗ
ಹಬ್ಬದ ಸಂಭ್ರಮ ಸಡಗರ
ಮನೆಯು ಆಗಿಹುದು
ಸಿರಿ ಧಾನ್ಯಗಳ ಆಗರ

ಮರಕ ರಾಶಿಯಲಿ ಕಿರಣ
ಬೀರುತ ರವಿಯ ಉದಯ
ಎಳ್ಳು ಬೆಲ್ಲವ ಹಂಚುವ
ಸುಗ್ಗಿ, ಸಂಕ್ರಮಣದ ಸಮಯ

ಸೋಮವಾರ, ಜನವರಿ 18, 2021

ಚಂದ್ರ ವದನೆ

ಚೆಲುವೆಯ ಮೊಗದಲಿ ಶಶಿಯ ಕಂಡು
ಮೂಡಿದೆ ಹಲವು ಸುಂದರ ಭಾವನೆ
ತುಂಬಿದ ಬಿಂದಿಗೆಯ ಪಕ್ಕದಲಿ ಇಟ್ಟು
ಇನಿಯನ ನೆನಪಲಿ ಕುಳಿತಹಳು ಸುಮ್ಮನೆ

ಇನಿಯನ ನೆನೆಯುತ ಮೈಯ ಮರೆತು
ನಾಚಿ ನೀರಾದಳು ಮಾನಿನಿ ಮೆಲ್ಲನೆ
ತಂಗಾಳಿಯ ಹಿತವಾಗಿಹ ಸ್ಪರ್ಶಕೆ
ಮನದಿ ಮೂಡಿತು ಹಲವು ಕಾಮನೆ

ಹೊಂಬಣ್ಣದ ಮೈಯ ತುಂಬಿದ ಗಲ್ಲದ
ಅಂಗನೆಯ ಚೆಲುವಿಗೆ ಶಶಿ ಸೋತನೇ?
ವರ್ಣಿಸಲು ಸೌಂದರ್ಯ ಇಲ್ಲ ಪದವು
ಹೊಳೆಯುವ ಕಣ್ಣುಗಳ ಚಂದ್ರ ವದನೆ

ರಸಮಯ ಭಾವಗಳು ಮೂಡಿರಲು
ಸುಂದರವು ಕವಿಯ ಮನದ ಕಲ್ಪನೆ
ಪ್ರಕೃತಿ ರಮ್ಯತೆಯಲಿ ತನ್ನನೇ ತಾನು
ಮರೆತು ಕುಳಿತಿಹಳು ಚಿರ ಯೌವ್ವನೆ